ಹೊಸ ದಿಗಂತ ವರದಿ, ಕಾರವಾರ:
ತಮ್ಮ ಸುತ್ತ ಮುತ್ತ ಭಯ ಹುಟ್ಟಿಸುವಂಥ ಹಲವಾರು ಕೃತ್ಯಗಳು ನಡೆಯುತ್ತಿದ್ದು ತಮಗೆ ಜೀವ ಬೆದರಿಕೆ ಇರುವುದಾಗಿ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಆರೋಪಿಸಿದ್ದಾರೆ.
ಬುಧವಾರ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಯಲ್ಲಿ ಟಿಕೆಟ್ ಸಿಕ್ಕ ಸಂದರ್ಭದಿಂದಲೇ ಬೇರೆ ಬೇರೆ ರೀತಿಯಲ್ಲಿ ಬೆದರಿಕೆ ಒಡ್ಡುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
ರಾತ್ರಿ ಸಮಯದಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು, ವಾಹನವನ್ನು ಕಾರಲ್ಲಿ ಹಿಂಬಾಲಿಸುವುದು, ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲೆ ಸಂಪೂರ್ಣ ಹೆಲ್ಮೆಟ್ ಧರಿಸಿ ಹಿಂಬಾಲಿಸಿ ಬರುವುದು, ಮನೆ ಎದುರಿನ ಬೀದಿ ದೀಪ ತೆಗೆಯುವುದು, ಜೋರಾದ ಶಬ್ದ ಮಾಡುತ್ತಾ ಮನೆ ಎದುರು ಬೈಕ್ ಓಡಿಸುವುದು ಮೊದಲಾದ ಕೃತ್ಯಗಳು ಆಗಾಗ ನಡೆಯುತ್ತಿದ್ದು ಈ ಕುರಿತು ಹಿಂದಿನ ಪೊಲೀಸ್ ವರಿಷ್ಠರಿಗೆ ತಿಳಿಸಿದ ನಂತರ ಸೂಕ್ತ ಪೊಲೀಸ್ ರಕ್ಷಣೆ ನೀಡಿದ್ದಾರೆ, ಇಂದಿನ ಪೊಲೀಸ್ ವರಿಷ್ಠರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ ಇದೀಗ ಗನ್ ಪರವಾನಗಿ ಸಹ ದೊರಕಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.
ಮಗ ಮತ್ತು ಅಕ್ಕನ ಮಗನನ್ನು ಕಿಡ್ನಾಪ್ ಮಾಡುವ ಪ್ರಯತ್ನ ನಡೆದಿತ್ತು ಈಗಲೂ ನಡೆಸಲಾಗುತ್ತಿದೆ ಎಂದ ಅವರು, ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಕಂಡು ತಮಗೆ ಅಧಿಕಾರ ಸಿಗುವುದಿಲ್ಲ ಎಂದು ಹತಾಶೆಯಿಂದ ಹೆದರಿಸುವ ತಂತ್ರಗಾರಿಕೆಯನ್ನು ಮಾಡಲಾಗುತ್ತಿದೆ ಆದರೆ ಇದರಿಂದ ರಾಜಕೀಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಸಾಯುವುದು ಒಂದು ದಿನ ಹೇಗಾದರೂ ಸಾಯಲೇಬೇಕು ಯಾವ ಕೆಲಸ ಮಾಡಬೇಕೋ ಅದನ್ನು ಮಾಡಿ ಸಾಯುತ್ತೇನೆ. ರಾಜಕೀಯವಾಗಿ ಹಲವಾರು ವಿರೋಧಿಗಳಿದ್ದು ಯಾರ ಕೃತ್ಯ ಎಂದು ಹೇಳಲಾಗದು
ಈ ಎಲ್ಲಾ ವಿಷಯಗಳನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಗಮನಕ್ಕೆ ತರಲಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು ಎಂದರು.