ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ (Congress) ಆಡಳಿತದಲ್ಲಿ ಹನುಮಾನ್ ಚಾಲೀಸಾ (Hanuman Chalisa) ಕೇಳುವುದು ಅಪರಾಧವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಬೆಂಗಳೂರಿನ ಉದಾಹರಣೆ ನೀಡಿ ವಾಗ್ದಾಳಿ ನಡೆಸಿದ್ದಾರೆ.
ಜೈಪುರ(ಏ.23) ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಹೆಣ್ಣುಮಕ್ಕಳ ಹತ್ಯೆಯಾಗುತ್ತಿದೆ. ಹನುಮಾನ್ ಚಾಲೀಸ ಭಜನೆ ಕೇಳಿದರೂ ಹಲ್ಲೆಯಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಪೋರೇಟರ್ ಪುತ್ರಿ ನೇಹಾ ಹೀರೆಮಠ್ ಹತ್ಯೆ ಪ್ರಕರಣ ಹಾಗೂ ಕೇಳಿ ಬಂದಿರುವ ಲವ್ ಜಿಹಾದ್ ಆರೋಪವನ್ನು ಮೋದಿ ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
ಮೊಬೈಲ್ ಶಾಪ್ ಮಾಲೀಕ ತನ್ನ ಭಕ್ತಿ ಹಾಗೂ ನಂಬಿಕೆಯ ಹನುಮಾನ್ ಚಾಲೀಸಾ ಹಾಡು ಹಾಕಿದ್ದಕ್ಕೆ ಕರ್ನಾಟಕ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಹಿಂದು ವ್ಯಕ್ತಿ ಮೇಲೆ ಹಲ್ಲೆಯಾಗಿದೆ. ಇಷ್ಟೇ ಅಲ್ಲ ಕಾಂಗ್ರೆಸ್ ಅಯೋಧ್ಯೆ ರಾಮ ಮಂದಿರವನ್ನು ವಿರೋಧಿಸಿದರು, ಪ್ರಾಣಪ್ರತಿಷ್ಠೆ ವಿರೋಧಿಸಿದರು. ಅಹ್ವಾನ ತಿರಸ್ಕರಿಸಿದರು ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಮುಸ್ಲಿಮರಿಗೆ ದೇಶದ ಸಂಪತ್ತಿನ ಮೊದಲ ಹಕ್ಕು ಅನ್ನೋ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿ ಮಾಡಿದ್ದ ಭಾಷಣ ಕುರಿತು ಭಾರಿ ಟೀಕೆಗಳು ಕೇಳಿಬಂದಿದೆ. ಹೀಗಾಗಿ ಈ ಹೇಳಿಕೆಯ ಮುಂದುವರಿದ ಬಾಗವನ್ನು ಚುನಾವಣಾ ಪ್ರಚಾರದಲ್ಲಿ ಮಾಡಿದ್ದಾರೆ. ಮನ್ಮೋಹನ್ ಸಿಂಗ್ ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಅಧಿಕಾರ ಅನ್ನೋ ಹೇಳಿಕೆ ನೀಡಿದ ಸಭೆಯಲ್ಲಿ ನಾನು ಇದ್ದೆ. ಕಾಂಗ್ರೆಸ್ ಈ ರೀತಿ ತುಷ್ಠೀಕರಣ ಇದೇ ಮೊದಲಲ್ಲ. ತನ್ನ ಆಡಳಿತದಲ್ಲೇ ಈ ರೀತಿಯ ತುಷ್ಠೀಕರಣ ಮಾಡುತ್ತಲೇ ಬಂದಿದೆ ಎಂದು ಮೋದಿ ಹೇಳಿದ್ದಾರೆ.
2004ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಎಸ್ಸಿ, ಎಸ್ಟಿ ಹಾಗೂ ಒಬಿಸಿಯ ಮೀಸಲಾತಿಯನ್ನು ತೆಗೆದು ದೇಶಾದ್ಯಂತ ಮುಸ್ಲಿಮರಿಗೆ ಹಂಚಲು ಮುಂದಾಗಿತ್ತು. ಇದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿತ್ತು. ಆದರೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಕಾರಣ ಕಾಂಗ್ರೆಸ್ ಈ ಯೋಜನೆ ಜಾರಿಗೆ ಬರಲಿಲ್ಲ ಎಂದು ಮೋದಿ ಹೇಳಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಒಂದಕ್ಕಿಂತ ಹೆಚ್ಚು ಮನೆಯಿದ್ದರೆ ಅದನ್ನು ಸರ್ಕಾರ ವಶಕ್ಕೆ ಪಡೆದು ಬಡವರಿಗೆ ಹಂಚಲಿದೆ ಅನ್ನೋ ಹೇಳಿಕೆಯನ್ನು ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮನೆಗಳನ್ನು ಸರ್ಕಾರದ ವಶವಾಗಲಿದೆ. ಇದಕ್ಕೆ ಅವಕಾಶ ನೀಡಬಾರದು. ಕಷ್ಟ ಪಟ್ಟು ಖರೀದಿಸಿದ ಮನೆಯನ್ನು ಇನ್ಯಾರಿಗೋ ನೀಡಲು ನಿಮ್ಮ ಸಹಮತವಿದೆಯಾ ಎಂದು ಮೋದಿ ಮತದಾರರನ್ನು ಪ್ರಶ್ನಿಸಿದ್ದಾರೆ.