ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಗವಾನ್ ಶ್ರೀರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಇದ್ದಾನೆ. ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಇರಲಿ ಎಚ್ಚರ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಚುನಾವಣೆ ರ್ಯಾಲಿಯೊಂದರಲ್ಲಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಿಮ್ಮ ಬಳಿ ಬಂದು ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಹೇಳುತ್ತಾರೆ. ಭಾರತದಲ್ಲಿ ಶೇ.70 ರಿಂದ 80 ರಷ್ಟು ಹಿಂದೂ ಜನಸಂಖ್ಯೆ ಇದೆ. ಅವರು ಅಪಾಯದಲ್ಲಿದ್ದಾರೆ ಎಂದು ನೀವು ಭಾವಿಸುತ್ತೀರಾ ಎಂದು ಪ್ರಶ್ನಿಸಿದರು.
ಇಲ್ಲಿ ಯಾವುದೇ ಧರ್ಮ ಕೆಟ್ಟದ್ದಲ್ಲ. ಆದರೆ ಮನುಷ್ಯರು ಭ್ರಷ್ಟರಾಗಿದ್ದಾರೆ, ಧರ್ಮವಲ್ಲ. ಚುನಾವಣೆಯ ಸಮಯದಲ್ಲಿ ‘ಹಿಂದೂ ಖತ್ರೇ ಮೈ ಹೈ’ ಅನ್ನು ಹೆಚ್ಚು ಬಳಸುತ್ತಾರೆ. ಆದರೆ ಅದಕ್ಕೆ ಬಲಿಯಾಗಬೇಡಿ ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಮನವಿಮಾಡಿದ್ದಾರೆ.
ಇದೇ ವೇಳೆ ಕಾಶ್ಮೀರ ಕಣಿವೆಯಲ್ಲಿ ಮುಸ್ಲಿಂ ಶಾಲಾ ಮಕ್ಕಳನ್ನು ‘ರಘುಪತಿ ರಾಘವ್ ರಾಜಾ ರಾಮ್” ಎಂಬ ಹಿಂದೂ ಶ್ಲೋಕವನ್ನು ಹಾಡುವಂತೆ ಮಾಡಲಾಗಿದ್ದು, ಈ ಮೂಲಕ ಬಿಜೆಪಿ ಶಾಲೆಗಳಲ್ಲಿ ತನ್ನ ಹಿಂದುತ್ವದ ಅಜೆಂಡಾವನ್ನು ಪ್ರಚಾರ ಮಾಡುತ್ತಿದೆ ಎಂಬ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಹೇಳಿಕೆಯನ್ನು ಅಬ್ದುಲ್ಲಾ ತಿರಸ್ಕರಿಸಿದ್ದಾರೆ.
ಹಿಂದೂಗಳು ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡಿದರೆ, ಪುರುಷನೇ ಆಗಲಿ ಅಥವಾ ಮಹಿಳೆಯೇ ಆಗಲಿ ಮುಸ್ಲಿಂ ಆಗಿ ಪರಿವರ್ತನೆ ಹೊಂದುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ನ್ಯಾಶನಲ್ ಕಾನ್ಫರೆನ್ಸ್ ಎಂದಿಗೂ ಪಾಕಿಸ್ತಾನದ ಪರವಾಗಿರಲಿಲ್ಲ. ಯಾವಾಗಲೂ ಭಾರತದೊಂದಿಗೆ ಗಟ್ಟಿಯಾಗಿ ನಿಂತಿದೆ. ನಾವು ಎಂದಿಗೂ ಪಾಕಿಸ್ತಾನದೊಂದಿಗೆ ಕೈಜೋಡಿಸಲಿಲ್ಲ. ಜಿನ್ನಾ ಅವರು ನನ್ನ ತಂದೆಯನ್ನು ಭೇಟಿಯಾಗಲು ಬಂದಿದ್ದರು, ಆದರೆ ನಾವು ಅವರೊಂದಿಗೆ ಕೈಜೋಡಿಸಲು ನಿರಾಕರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.