ಹೊಸ ದಿಗಂತ ವರದಿ, ಕುಶಾಲನಗರ:
ಆಟೋ ಮಗುಚಿಕೊಂಡ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿ, ಇಬ್ಬರು ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಕೂಡ್ಲೂರಿನಲ್ಲಿ ನಡೆದಿದೆ.
ಮೃತರನ್ನು ಕೆ.ಆರ್.ನಗರ ತಾಲೂಕಿನ ಕೊರಟಿಕೆರೆ ಗ್ರಾಮದ ಪಂಕಜಮ್ಮ (55) ಎಂದು ಗುರುತಿಸಲಾಗಿದ್ದು, ಅವರ ತಂಗಿ ಕೂಡಿಗೆಯ ಲೀಲಾವತಿ ಮತ್ತು ವಿಜಯಲಕ್ಷ್ಮಿ ಎಂಬವರು ಗಾಯಗೊಂಡಿದ್ದಾರೆ. ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಕೂಡಿಗೆಯಿಂದ ಕುಶಾಲನಗರ ಕಡೆಗೆ ಪ್ರತಿನಿತ್ಯ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಆಟೋದಲ್ಲಿ ಪಂಕಜಮ್ಮ, ಅವರ ಮಗ ಮತ್ತು ಇಬ್ಬರು ಸಹೋದರಿಯರು ಕುಶಾಲನಗರಕ್ಕೆ ತೆರಳುತ್ತಿದ್ದ ಸಂದರ್ಭ ಕೂಡ್ಲೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಮಗುಚಿಕೊಂಡಿದೆ. ಈ ಸಂದರ್ಭ ಗಾಯಗೊಂಡ ಪಂಕಜಮ್ಮ ಅವರನ್ನು ಕುಶಾಲನಗರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಆ ವೇಳೆಗಾಗಲೇ ಅವರು ಸಾವಿಗೀಡಾಗಿದ್ದರು.
ಆಟೋ ಚಾಲಕ ಅನೀಶ್ ಎಂಬವರ ವಿರುದ್ಧ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಳೆದ ವಾರವಷ್ಟೇ ಪಂಕಜಮ್ಮನ ಅಕ್ಕ ಮೃತಪಟ್ಟಿದ್ದು, ಅವರ ತಿಥಿ ಕರ್ಮಾಂತರದ ಕಾರ್ಡ್’ನ್ನು ಕೂಡಿಗೆಯಲ್ಲಿರುವ ತನ್ನ ತಂಗಿಯರಾದ ಲೀಲಾವತಿ ಮತ್ತು ವಿಜಯಲಕ್ಷ್ಮಿಯವರಿಗೆ ನೀಡಲು ಬಂದಾಗ ಪಂಕಜಮ್ಮ ಸಾವಿಗೀಡಾಗಿದ್ದಾರೆನ್ನಲಾಗಿದೆ.