ಹೊಸದಿಗಂತ ವರದಿ,ಕೆ.ಆರ್.ಪೇಟೆ :
ಲಾರಿ ಹಾಗೂ ಬೈಕ್ ಅಪಘಾತದಲ್ಲಿ ಗರ್ಭಿಣಿ ಮಹಿಳೆಯೋರ್ವಳು ಸ್ಥಳದಲ್ಲಿಯೇ ಸಾವಿಗೀಡಾದ ಪ್ರಕರಣ ಭಾನುವಾರ ತಾಲೂಕಿನ ಕಿಕ್ಕೇರಿ ಅಂಚೆ ಕಛೇರಿ ಸಮೀಪ ಜರುಗಿದೆ.
ಮೃತ ಮಹಿಳೆ ತಾಲೂಕಿನ ಮಾಚೋಗನಹಳ್ಳಿ ಗ್ರಾಮದ ಸಹನಾ(20). ಗರ್ಭಿಣಿಯಾದ ಸಹನಾ ತನ್ನ ಪತಿ ಸಂದೀಪ್ ಜೊತೆ ಚನ್ನರಾಯಪಟ್ಟಣದ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ಬೈಕ್ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಗ್ರಾಮದಿಂದ ಚನ್ನರಾಯಪಟ್ಟಣಕ್ಕೆ ತೆರಳುವಾಗ ಕಿಕ್ಕೇರಿ ಮಾರ್ಗವಾಗಿ ಸಾಗುತ್ತಿದ್ದಾರೆ. ಕಿಕ್ಕೇರಿ ಅಂಚೆ ಕಛೇರಿ ಸಮೀಪ ಬಂದಾಗ ಹಿಂಬದಿಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ತಲೆಕೆಳಗಾಗಿ ಸಹನಾ ಬಿದ್ದಿದ್ದಾರೆ.
ಈಕೆಯ ತಲೆಯ ಮೇಲೆ ಲಾರಿಯ ಚಕ್ರ ಹರಿದ ಕಾರಣ ಸ್ಥಳದಲ್ಲಿಯೇ ಅಸುನೀಗಿದ್ದಾಳೆ.
ಕಿಕ್ಕೇರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿ ಲಾರಿ ಚಾಲಕ ನಾಪತ್ತೆಯಾಗಿದ್ದಾನೆ.