ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok sabha Election) ಕೇರಳದಲ್ಲಿ ಕಮಲ ಅರಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಹೇಳಿದ್ದಾರೆ.
ಪತ್ತನಂತಿಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಆ್ಯಂಟನಿ ಪರ ಪ್ರಚಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸೀಟುಗಳನ್ನು ಗೆಲ್ಲುವ ಭರವಸೆ ಇದೆ. ಅದೇ ವೇಳೆ ಈ ಬಾರಿ ಕೇರಳದಲ್ಲಿ ತಮ್ಮ ಪಕ್ಷ ಎರಡಂಕಿ ಸೀಟು ಪಡೆಯುವುದಾಗಿ ಮೋದಿ ಹೇಳಿದ್ದಾರೆ.
ಮಲಯಾಳಂನಲ್ಲಿ ಭಾಷಣ ಆರಂಭಿಸಿ ಮಾತನಾಡಿದ ಮೋದಿ, ರಾಜ್ಯದ ಜನರು ಭ್ರಷ್ಟ ಮತ್ತು ಅಸಮರ್ಥ ಸರ್ಕಾರದಿಂದ ಬಳಲುತ್ತಿದ್ದಾರೆ. ಭ್ರಷ್ಟಾಚಾರ ಮತ್ತು ಅದಕ್ಷತೆಯಿಂದ ಪೀಡಿತ ಸರ್ಕಾರಗಳ ಅಡಿಯಲ್ಲಿ ರಾಜ್ಯದ ಜನರು ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ ಎಂದಿದ್ದಾರೆ.
ಎಲ್ಡಿಎಫ್ ಮತ್ತು ಯುಡಿಎಯು ಕೇರಳದಲ್ಲಿ ಜನರನ್ನು ಕಬಳಿಸುತ್ತಿದ್ದಾರೆ. ತ್ರಿಪುರದಲ್ಲೂ ತಮಿಳುನಾಡಿನಲ್ಲೂ ಅವರು ಹೇಳ ಹೆಸರಿಲ್ಲದಂತಾದರು. ಕಾಂಗ್ರೆಸ್ ಪಕ್ಷದ್ದು ಸೋಲಾರ್ ಹಗರಣ ಆಗಿದ್ದರೆ, ಎಲ್ಡಿಎಫ್ನದ್ದು ಚಿನ್ನದ ಹಗರಣ. ಅಕ್ರಮ ರಾಜಕೀಯ ಮತ್ತು ತಾರತಮ್ಯವೇ ಎರಡೂ ಪಕ್ಷಗಳ ಉದ್ದೇಶ ಎಂದು ಮೋದಿ ಕಾಂಗ್ರೆಸ್ ಮತ್ತು ಎಲ್ಡಿಎಫ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಮಲಯಾಳಿಗಳು ಪ್ರಗತಿಪರ ಚಿಂತನೆಯವರು. ಕಾಂಗ್ರೆಸ್ ಮತ್ತು ಎಲ್ ಡಿಎಫ್ ಪುರಾತನ ಕಾಲದ ಚಿಂತನೆಯುಳ್ಳವರು ಎಂದು ಮೋದಿ ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ, ನಾವು ಪ್ರತಿ ಪ್ರದೇಶದ ಪ್ರತಿಯೊಂದು ವರ್ಗದ ಜನರಿಗೆ ಸಾಧ್ಯವಾದಷ್ಟು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ನಾವು ಯುದ್ಧದಲ್ಲಿ ಸಿಲುಕಿಕೊಂಡಿದ್ದ ಇರಾಕ್ನಿಂದ ನರ್ಸ್ಗಳನ್ನು ಮರಳಿ ಕರೆತಂದಿದ್ದೇವೆ. ನಾವು ಬಿಕ್ಕಟ್ಟಿನ ನಡುವೆ ಸಿಲುಕಿಕೊಂಡಿದ್ದ ಪಾದ್ರಿಗಳನ್ನು ಮರಳಿ ಕರೆತಂದಿದ್ದೇವೆ. ಕೊರೋನಾ ಸಮಯದಲ್ಲಿ ಭಾರತೀಯರನ್ನು ಪ್ರಪಂಚದ ಪ್ರತಿಯೊಂದು ಭಾಗದಿಂದ ಮರಳಿ ಕರೆತರಲಾಯಿತು. ಏಕೆಂದರೆ ಒಬ್ಬ ಭಾರತೀಯ ತೊಂದರೆಯಲ್ಲಿದ್ದರೂ, ನಮ್ಮ ಸರ್ಕಾರವು ಅವರೊಂದಿಗೆ ಬಲವಾಗಿ ನಿಂತಿದೆ, ಇದು ‘ಮೋದಿಯವರ ಗ್ಯಾರಂಟಿ” ಎಂದುನಿ ಹೇಳಿದರು.