ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಕೆಂಗೇರಿಯಲ್ಲಿ ಕುಟುಂಬ ಸಂಬಂಧಗಳನ್ನೇ ಪ್ರಶ್ನಿಸುವಂತ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮದ್ಯಪಾನದ ವಿಚಾರವಾಗಿ ಉಂಟಾದ ತೀವ್ರ ವಾಗ್ವಾದವು ಭೀಕರ ತಿರುವು ಪಡೆದು, 70 ವರ್ಷದ ವೃದ್ಧೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಮೃತರ ಮಗಳು ಮತ್ತು ಮೊಮ್ಮಗನ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಮದ್ಯಪಾನಕ್ಕೆ ವಿರೋಧವೇ ಕಾರಣ?
ಮೃತರನ್ನು ಜಯಮ್ಮ ಎಂದು ಗುರುತಿಸಲಾಗಿದೆ. ಮದ್ಯ ಸೇವನೆ ಮತ್ತು ಆಸ್ತಿ ಮಾರಾಟದ ವಿಚಾರವಾಗಿ ಮನೆಯಲ್ಲಿ ಪದೇಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿಚಾರ ಮತ್ತೆ ತೀವ್ರಗೊಂಡು ಪರಿಸ್ಥಿತಿ ಹಿಂಸಾತ್ಮಕವಾಗಿ ಮಾರ್ಪಟ್ಟಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ:
ಮನೆಯಲ್ಲೇ ಶವ ಮುಚ್ಚಿಟ್ಟ ಆರೋಪ
ಘಟನೆಯ ಬಳಿಕ ಯಾರಿಗೂ ತಿಳಿಯದಂತೆ ಶವವನ್ನು ಮನೆಯಲ್ಲೇ ಇರಿಸಲಾಗಿತ್ತು. ನಂತರ ಆರೋಪಿಯ ಸ್ನೇಹಿತನಿಗೆ ಕರೆ ಮಾಡಿದ ಸಂದರ್ಭ ವಿಷಯ ಬಹಿರಂಗಗೊಂಡಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಮಗಳ ಮನೆಗೆ ಬಂದಿದ್ದ ಜಯಮ್ಮ
ಹಾಸನದಿಂದ ಬೆಂಗಳೂರಿಗೆ ಬಂದಿದ್ದ ಜಯಮ್ಮ ಕಳೆದ ಎರಡು ತಿಂಗಳಿಂದ ಮಗಳ ಜೊತೆಯೇ ವಾಸಿಸುತ್ತಿದ್ದರು. ನೆರೆಹೊರೆಯವರ ಪ್ರಕಾರ, ಮನೆಯಲ್ಲಿ ಆಗಾಗ ಗಲಾಟೆಗಳು ನಡೆಯುತ್ತಿದ್ದವು.
ಪ್ರಕರಣ ದಾಖಲಿಸಿ ತನಿಖೆ ಆರಂಭ
ಭಾಗ್ಯಲಕ್ಷ್ಮಿ ಮತ್ತು ಕುಶಾಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿರುವ ಕೆಂಗೇರಿ ಪೊಲೀಸರು, ಇಬ್ಬರನ್ನೂ ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



