ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಳೇ ಸೂರ್ಲು ಮದ್ರಸ ಶಿಕ್ಷಕ, ಕೊಡಗು ನಿವಾಸಿ ಮಹಮ್ಮದ್ ರಿಯಾಸ್ ಮೌಲವಿ (28) ಕೊಲೆ ಪ್ರಕರಣಕ್ಕೆ ಮರುಜೀವ ಬಂದಿದೆ.
ಈಗಾಗಲೇ ಖುಲಾಸೆಗೊಂಡಿರುವ ಮೂವರು ಆರೋಪಿಗಳು ಮುಂದಿನ ಹತ್ತು ದಿನಗಳ ಮೊದಲು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಖುದ್ದು ಹಾಜರಾಗುವಂತೆ ಹೈಕೋರ್ಟು ವಿಭಾಗೀಯ ಪೀಠ ಆದೇಶ ನೀಡಿದೆ.
ಇದಲ್ಲದೆ ತಲಾ 50 ಸಾವಿರ ರೂ. ಮೊತ್ತದ ಸ್ವಂತ ಮುಚ್ಚಳಿಕೆ, ಈ ಮೊತ್ತಕ್ಕೆ ಸಮನಾಗಿ ಇಬ್ಬರ ಜಾಮೀನು ಮುಚ್ಚಳಿಕೆಯನ್ನೂ ಸಲ್ಲಿಸುವಂತೆಯೂ ನ್ಯಾಯ ಪೀಠ ಆದೇಶ ನೀಡಿದ್ದು, ತಪ್ಪಿದಲ್ಲಿ ಆರೋಪಿಗಳ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ ಮಾಡಲು ಸೂಚಿಸಿದೆ.
ಈ ಪ್ರಕರಣದಲ್ಲಿ ಕಾಸರಗೋಡು ಕೇಳುಗುಡ್ಡೆ ನಿವಾಸಿ ಅಜೇಶ್ ಅಲಿಯಾಸ್ ಅಪ್ಪು(20), ಅಖಿಲೇಶ್ ಅಲಿಯಾಸ್ ಅಖಿಲ್(25) ಹಾಗೂ ಕೇಳುಗುಡ್ಡೆ ನಿವಾಸಿ ನಿತಿನ್(19)ಎಂಬವರನ್ನು ಆರೋಪಿಗಳಾಗಿ ಗುರುತಿಸಲಾಗಿತ್ತು. ವಿಚಾರಣೆ ನಡೆಸಿದ್ದ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ವರನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕೇರಳ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ಈ ಆದೇಶ ನೀಡಿದೆ. ಜೊತೆಗೆ ಆರೋಪಿಗಳು ಜಿಲ್ಲಾ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಿಂದ ಹೊರಕ್ಕೆ ತೆರಳದಂತೆ ನಿರ್ಬಂಧ ಹೇರಿ ಆರೋಪಿಗಳಿಗೆ ಜಾಮೀನು ಮಂಜೂರುಮಾಡುವಂತೆಯೂ ಹೇಳಿದೆ.