ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಭರ್ಜರಿ ಗೆಲುವು ದಾಖಲಿಸಿದ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು ಸ್ಪಷ್ಟ ಬಹುಮತ ಪಡೆಯುವಲ್ಲಿ ಎಡವಿದ್ದು, ಹೀಗಾಗಿ ಸರಕಾರ ರಚನೆಗೆ ಕಸರತ್ತು ನಡೆಸುತ್ತಿದೆ. ಈ ಬೆನ್ನಲ್ಲೇ ರೆಸಾರ್ಟ್ ರಾಜಕೀಯ ಗರಿಗೆದರಿದೆ.
ಇತ್ತ ಎರಡು ಬಾರಿ ಸರಕಾರ ರಚನೆಗೆ ಮಂಡಿಸಿದ ಹಕ್ಕನ್ನು ರಾಜ್ಯಪಾಲರು ನಿರಾಕರಿಸಿದ್ದು, ಸ್ಪಷ್ಟ ಬಹುಮತ ತೋರಿಸುವಂತೆ ತಿಳಿಸಿದ್ದಾರೆ. ಹೀಗಾಗಿ ಬೇರೆ ಪಕ್ಷಗಳ ಶಾಸಕರನ್ನು ಸೆಳೆಯಲು ಯತ್ನಗಳು ನಡೆಯುತ್ತಿದೆ. ಈ ಬೆನ್ನಲ್ಲೇ ಎಐಎಡಿಎಂಕೆ ತನ್ನ ಶಾಸಕರನ್ನು ಪುದುಚೇರಿಯ ಪೂರನ್ಕುಪ್ಪಂನಲ್ಲಿರುವ ಖಾಸಗಿ ರೆಸಾರ್ಟ್ಗೆ ಸ್ಥಳಾಂತರ ಮಾಡಿದೆ.
ಎಐಎಡಿಎಂಕೆ ಪಕ್ಷದ ಕೆಲವು ಶಾಸಕರು ವಿಜಯ್ ಪರ ಒಲವು ಹೊಂದಿದ್ದಾರೆ. ಹೀಗಾಗಿ ಎಐಎಡಿಎಂಕೆ ಹಿರಿಯ ನಾಯಕ ಸಿವಿ ಷಣ್ಮುಗಂ ಅವರ ಬೆಂಬಲಿಗ ಶಾಸಕರನ್ನು ರೆಸಾರ್ಟ್ಗೆ ಸ್ಥಳಾಂತರ ಮಾಡಲಾಗಿದೆ.
ವಿಜಯ್ ಗೆ ಈಗಾಗಲೇ ಐದು ಕಾಂಗ್ರೆಸ್ ಶಾಸಕರ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಆದರೆ ಬಹುಮತವನ್ನು ತಲುಪಲು ಇನ್ನೂ ಐದು ಶಾಸಕರ ಬೆಂಬಲದ ಅಗತ್ಯವಿದೆ. ಹೀಗಾಗಿ ಉಳಿದ ಪಕ್ಷದ ಶಾಸಕರಲ್ಲಿ ಭೀತಿ ಶುರುವಾಗಿದ್ದು, ರೆಸಾರ್ಟ್ ನತ್ತ ಮುಖಮಾಡಿದ್ದಾರೆ.



