ಮಹಾರಾಷ್ಟ್ರ ಅಧಿಕಾರ ಹೊಯ್ದಾಟ- ಇಲ್ಲಿದೆ 7 ಅಂಶಗಳ ಅಪ್ಡೇಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಒಂದೆಡೆ ಶಿವಸೇನೆಯ ಬಂಡಾಯದ ನಾಯಕ ಏಕನಾಥ್‌ ಶಿಂಧೆಯನ್ನು ಬೆಂಬಲಿಸುತ್ತಿರುವ ಶಾಸಕರ ಸಂಖ್ಯೆ 46ಕ್ಕೆ ಏರಿಕೆಯಾಗಿದ್ದರೆ ಇನ್ನೊಂದೆಡೆ ಕೋವಿಡ್‌ ಪಾಸಿಟಿವ್‌ ಗೆ ತುತ್ತಾಗಿರುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಶಿವಸೇನೆ ಶಾಸಕಾಂಗ ಪಕ್ಷದ ಸಭೆಯನ್ನು ವರ್ಚುವಲ್‌ ಆಗಿ ನಡೆಸಿದ್ದಾರೆ. ಈ ಕುರಿತು ಏನೆಲ್ಲಾ ಬೆಳವಣಿಗೆಯಾಗಿದೆ ಎಂಬುದರ ಕುರಿತು ಪ್ರಮುಖ 7 ಅಂಶಗಳು ಇಲ್ಲಿವೆ

  • ನಿನ್ನೆ ರಾತ್ರಿ ಸೂರತ್‌ ನಲ್ಲಿದ್ದ ಬಂಡಾಯ ಶಾಸಕರು ಇಂದು ಮುಂಜಾನ್‌ ಗುವಾಹಟಿಯ ಖಾಸಗಿ ಹೋಟೆಲ್‌ ಗೆ ತೆರಳಿದ್ದಾರೆ. ಏಕನಾಥ್ ಶಿಂಧೆಯವರ ಬೆಂಬಲಕ್ಕೆ 46 ಶಾಸಕರಿದ್ದಾರೆ ಎಂದು ಸ್ವತಃ ಶಿಂಧೆ ಹೇಳಿದ್ದಾರೆ. ನಾವು ಭಾಳಾ ಸಾಹೇಬರ ಹಿಂದುತ್ವವನ್ನು ಬೆಂಬಲಿಸುತ್ತೇವೆ. ಮತ್ತೆ ಶಿವಸೇನೆಯೊಂದಿಗೆ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗದಿರಲು ಬೇಕಾಗುವಷ್ಟು ಸಂಖ್ಯಾಬೆಂಬಲ ನನ್ನೊಂದಿಗೆ ಇದೆ ಎಂದು ಏಕನಾಥ್‌ ಶಿಂಧೆ ಹೇಳಿದ್ದಾರೆ.
  • ಮಹಾರಾಷ್ಟ್ರದ ವಿಧಾನ ಸಭೆಯು ವಿಸರ್ಜನೆ ಹಂತಕ್ಕೆ ತಲುಪಿದೆ ಎಂದು ಶಿವಸೇನೆಯ ಮುಖಂಡ ಸಂಜಯ್‌ ರಾವತ್‌ ಟ್ವೀಟ್‌ ಮಾಡಿದ್ದರು. ಇದು ಮಹಾರಾಷ್ಟ್ರದ ಆಘಾಡಿ ಸರ್ಕಾರಿ ಬೀಳಲಿದೆ ಎಂಬ ಮುನ್ಸೂಚನೆ ನೀಡಿತ್ತು.
  • ಇವೆಲ್ಲದರ ನಡುವೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಶಿವಸೇನೆಯ ಶಾಸಕಾಂಗ ಪಕ್ಷದ ಸಭೆಯನ್ನು ಅವರು ವರ್ಚುವಲ್‌ ಮೂಲಕ ನಡೆಸಿದ್ದಾರೆ. ಈ ವೇಳೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಕೆಲ ಶಿವಸೇನೆಯ ಶಾಸಕರು ಸರ್ಕಾರವನ್ನು ವಿಸರ್ಜಿಸುವ ಪ್ರಸ್ತಾಪವನ್ನು ಯಾರೂ ಮಾಡಿಲ್ಲ. ಉದ್ಧವ್‌ ಠಾಕ್ರೆಯವರು ಯಾವುದೇ ಚಿಂತೆಗೊಳಗಾಗಿಲ್ಲ. ಅವರು ನಗುಮೊಗದಲ್ಲಿದ್ದರು ಎಂದು ಹೇಳಿದ್ದಾರೆ.
  • ಬಿಜೆಪಿಯ ದೇವೇಂದ್ರ ಫಡ್ನವೀಸ್‌ ಎಲ್ಲಾ ಶಾಸಕರು ಸೇರಿದಂತೆ ಪ್ರಮುಖರನ್ನೊಳಗೊಂಡ ಸಭೆ ನಡೆಸುತ್ತಿದ್ದಾರೆ. ಪ್ರಸ್ತುತ ಸರ್ಕಾರ ರಚಿಸುವ ಕುರಿತು ಸಂಖ್ಯಾಬಲ, ತೊಡಕುಗಳು ಇತ್ಯಾದಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಎಲ್ಲಾ ಶಾಸಕರೂ ಮುಂಬೈ ಬಿಟ್ಟು ಹೊರಹೋಗದಂತೆ ಬಿಜೆಪಿ ತಾಕೀತು ಮಾಡಿದೆ.
  • ಕಾಂಗ್ರೆಸ್‌ ಎನ್‌ಸಿಪಿ ಪಕ್ಷಗಳೂ ಕೂಡ ತಮ್ಮ ಪಕ್ಷದ ಸಭೆ ನಡೆಸಿದ್ದು ಎಂವಿಎಗೆ ಸಂಪೂರ್ಣಬೆಂಬಲ ಮುಂದುವರೆಸುವುದಾಗಿ ಹೇಳಿವೆ
  • ವಿಪ್‌ ಜಾರಿ ಮಾಡಿದರೆ ಬಂಡಾಯವೆದ್ದ ಶಾಸಕರು ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಅವರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಾಗುತ್ತದೆ. ಆದರೆ ಒಟ್ಟೂ ಶಾಸಕರ ಸಂಖ್ಯೆಯಲ್ಲಿ 2/3 ಭಾಗ ಶಾಸಕರು ಬಂಡಾಯವೆದ್ದಿದ್ದರೆ ಅಂಥಹ ಸಂದರ್ಭದಲ್ಲಿ ಈ ಕಾಯ್ದೆ ಅನ್ವಯವಾಗುವುದಿಲ್ಲ. ಪ್ರಸ್ತುತ ಆ ಸಂಖ್ಯಾ ಬಲ ನನ್ನ ಬಳಿ ಇದೆ ಎಂಬುದಾಗಿ ಶಿಂಧೆ ಹೇಳಿದ್ದಾರೆ.
  • ಮಹಾರಾಷ್ಟ್ರ ವಿಧಾನ ಸಭೆಯ ಒಟ್ಟೂ ಸಂಖ್ಯಾಬಲ 288. ಇದರಲ್ಲಿ ಬಹುಮತ ಸ್ಥಾಪಿಸಲು ಬೇಕಾದ ಮ್ಯಾಜಿಕ್‌ ನಂಬರ್‌ 145. ದರಲ್ಲಿ ಒಬ್ಬ ಶಾಸಕರು ಮರಣ ಹೊಂದಿದ್ದಾರೆ. ಹಾಗೂ ಇಬ್ಬರು ಜೈಲಿನಲ್ಲಿದ್ದಾರೆ ಹೀಗಾಗಿ ಸದನದ ಹಾಲಿ ಸಂಖ್ಯಾಬಲ 285 ಸದನದಲ್ಲಿ ಖಾಯಂ ಗೈರಾಗಿರುವ ಮೂವರನ್ನು ಹೊರತು ಪಡಿಸಿದಾಗ ಮ್ಯಾಜಿಕ್‌ ನಂಬರ್‌ ಕೂಡ 143ಕ್ಕೆ ಕುಸಿಯುತ್ತದೆ.  ಪ್ರಸ್ತುತ ವಿರೋಧ ಪಕ್ಷ ಬಿಜೆಪಿಯ ಶಾಸಕರ ಸಂಖ್ಯೆ 106. ಆದ್ದರಿಂದ ಸರ್ಕಾರ ರಚಿಸಲು ಬಿಜೆಪಿಗೆ 37 ಹೆಚ್ಚುವರಿ ಮತಗಳು ಬೇಕಾಗುತ್ತದೆ. ಈಗಾಗಲೇ 46 ಶಾಸಕರು ಏಕನಾಥ್‌ ಶಿಂಧೆಯವರೊಂದಿಗೆ ಇದ್ದಾರೆಂದು ಅವರೇ ಹೇಳಿರುವುದರಿಂದ ಬಿಜೆಪಿ ಏಕನಾಥ್‌ ಶಿಂದೆಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.
  • ಇನ್ನು ಮುಂದೆ ಏನಾಗಬಹುದು ಎಂದು ಅಂದಾಜಿಸುವುದಾದರೆ ಸದನದಲ್ಲಿ ಬಹುಮತ ಸಾಬೀತುಪಡಿಸಲಾಗದೆ ಶಿವಸೇನೆ ಅಧಿಕಾರದಿಂದ ಕೆಳಗಿಳಿಯಬಹುದು. ಸರಿಯಾದ ಸಂಖ್ಯಾಬಲದೊಂದಿಗೆ ಬಿಜೆಪಿ ಮತ್ತು ಬಂಡಾಯ ಶಾಸಕರು ಸರ್ಕಾರ ರಚಿಸಬಹುದು. ಒಂದು ವೇಳೆ ಬಹುಮತ ಸಾಬೀತುಪಡಿಸಲು ಉಭಯ ಕೂಟಗಳೂ ವಿಫಲವಾದರೆ ರಾಷ್ಟ್ರಪತಿ ಆಡಳಿತಕ್ಕಾಗಿ ರಾಜ್ಯಪಾಲರು ಶಿಫಾರಸ್ಸು ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!