Friday, December 8, 2023

Latest Posts

‘ಮಹಾದೇವ’ನ ಹೆಸರನ್ನೂ ಬಿಟ್ಟಿಲ್ಲ: ಛತ್ತೀಸ್‌ಗಢ ಸಿಎಂ ಬಘೇಲ್‌ರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಸಂಚಲನ ಮೂಡಿಸಿರುವ ‘ಮಹಾದೇವ್’ ಬೆಟ್ಟಿಂಗ್ ಆಪ್ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದು, ಕಾಂಗ್ರೆಸ್‌ನವರು ಮಹಾದೇವನ ಹೆಸರನ್ನೂ ಬಿಡದೆ ಜನರನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮಹಾದೇವ್ ಬೆಟ್ಟಿಂಗ್ ಆಪ್ ಹಗರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್‌ರನ್ನು ಪ್ರಧಾನಿ ಮೋದಿ ತರಾಟೆಗೆ ತೆಗೆದುಕೊಂಡಿದ್ದು, ಪ್ರಕರಣದ ಆರೋಪಿಗಳಿಗೂ ಕಾಂಗ್ರೆಸ್ ನಾಯಕರಿಗೂ ಯಾವ ರೀತಿ ಸಂಪರ್ಕ ಇದೆ ಎನ್ನೋದನ್ನು ಬಹಿರಂಗಪಡಿಸಿ ಎಂದಿದ್ದಾರೆ.

ಜಾರಿ ನಿರ್ದೇಶನಾಲಯದ ದಾಳಿ ವೇಳೆ ರಾಶಿ ರಾಶಿ ಹಣ ಸಿಕ್ಕಿದ್ದು, ಜನರು ಇವೆಲ್ಲವೂ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರ ಹಣ, ಕಾಂಗ್ರೆಸ್ ನಾಯಕರು ಬಡವರನ್ನು ಹಾಗೂ ಯುವಕರನ್ನು ಲೂಟಿ ಮಾಡಿ ತಮ್ಮ ಮನೆಯ ತಿಜೋರಿಯನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಈ ಪ್ರಕರಣದ ಆರೋಪಿಗಳೆಲ್ಲಾ ದುಬೈನಲ್ಲಿ ಕುಳಿತಿದ್ದಾರೆ. ಈ ಆರೋಪಿಗಳಿಗೂ ಕಾಂಗ್ರೆಸ್ ಸರ್ಕಾರಕ್ಕೂ ಏನು ಸಂಬಂಧ ಎನ್ನುವುದನ್ನು ತಿಳಿಸಿ ಎಂದಿದ್ದಾರೆ.

ಛತ್ತೀಸ್‌ಗಢವನ್ನು ಈ ರೀತಿ ಲೂಟಿ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ, ಭ್ರಷ್ಟ ಸರ್ಕಾರ ಜನರ ನಂಬಿಕೆಯನ್ನು ಮುರಿದಿದೆ. ಈ ಬಾರಿ ಬಿಜೆಪಿ ಸರ್ಕಾರ ರಚನೆಯಾಗಲಿ, ಈ ರೀತಿ ಒಂದು ಹಗರಣವೂ ಆಗದಂತೆ ನೋಡುತ್ತೇವೆ, ನಿಮ್ಮನ್ನು ಲೂಟಿ ಮಾಡಿದವರನ್ನು ಜೈಲಿಗೆ ಅಟ್ಟುತ್ತೇವೆ ಎಂದಿದ್ದಾರೆ.

ಮಹಾದೇವ್ ಬೆಟ್ಟಿಂಗ್ ಆಪ್ ಪ್ರವರ್ತಕರಿಂದ ಭೂಪೇಶ್ ಬಘೇಲ್ 508 ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದ್ದಾರೆ ಎನ್ನಲಾಗಿದ್ದು, ಯುಎಇ ಅಕೌಂಟ್ ಮೂಲಕ ಬಘೇಲ್‌ಗೆ ನಿಯಮಿತವಾಗಿ ಆಪ್ ಪ್ರವರ್ತಕರಿಂದ ಒಟ್ಟು 508 ಕೋಟಿ ರೂಪಾಯಿ ಹಣ ಸಂದಾಯವಾಗಿದೆ ಎಂದು ಹೇಳಲಾಗಿದೆ.

ರಾಯಪುರ ಸೇರಿ ಹಲವು ಕಡೆ ತನಿಖಾಧಿಕಾರಿಗಳು 5.39 ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಹಣ ಬಘೇಲ್‌ಗೆ ತಲುಪಿರುವುದಾಗಿ ವರದಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!