ಹೊಸದಿಗಂತ ವರದಿ,ಶಿವಮೊಗ್ಗ:
ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಮಹೋತ್ಸವ ಮತ್ತು ಶ್ರೀಗಳ ಪೀಠಾರೋಹಣದ ವರ್ಧಂತ್ಯೋತ್ಸವ ಸಮಾರಂಭ ಅದ್ದೂರಿಯಾಗಿ ನೆಡೆಯಿತು. ಡಾ. ವಿಶ್ವಸಂತೋಷ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜೆಗಳು ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ಮೂರು ವರ್ಷದಿಂದ ಕರೋನ ಕಾರಣಗಳಿಂದ ಜಾಸ್ತಿ ಜನರು ಆಗಮಿಸುತ್ತಿರಲಿಲ್ಲ. ಈ ಬಾರಿ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದಾರೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಸಹ ಭಕ್ತರು ಆಗಮಿಸಿದ್ದಾರೆ. ವಿಶೇಷವಾಗಿ ಆಗಮಿಸುವ ಗರುಡವನ್ನು ನೋಡಲು ಭಕ್ತರು ಆಗಮಿಸುತ್ತಾರೆ. ತಿರುವಾಭರಣ ಉತ್ಸವ ಹೊರಡಲು ಗರುಡ ಬರುತ್ತದೆ. ಅದುವೇ ಇಲ್ಲಿನ ವಿಶೇಷ ಎಂದು ತಿಳಿಸಿದರು.
ಶಬರಿಮಲೆಗೆ ಮುಂಚೆ ಹೋಗುತ್ತಿದ್ದ ರೀತಿಯಲ್ಲಿ ಈಗ ಇಲ್ಲ. ಅಲ್ಲಿನ ಸರ್ಕಾರ ಕೂಡ ಕಠಿಣ ಕ್ರಮ ಜರುಗಿಸುತ್ತಿದೆ. ಅಲ್ಲಿ ಮತಾಂತರ ಮತ್ತು ಲವ್ ಜಿಹಾದ್ ನಂತಹ ಕ್ರಿಯೆಗಳು ಹಿಂದೂಗಳ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಬೇರೆ ಬೇರೆ ತೊಂದರೆಗಳಿಂದ ಶಬರಿಮಲೆಗೆ ಹೋಗುವುದು ಕಷ್ಟವಾಗಿದೆ. ಹಾಗಾಗಿ ಕರ್ನಾಟಕದ ಶಬರಿಮಲೆ ಖ್ಯಾತಿಯ ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಜನರು ಆಗಮಿಸುತ್ತಾರೆ ಎಂದರು.
ಉತ್ಸವದಲ್ಲಿ ಚಿತ್ರದುರ್ಗದ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾ ಸಂಸ್ಥಾನ ಮಠದ ಡಾ. ಶಾಂತವೀರ ಸ್ವಾಮೀಜಿ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾಗಿದ್ದರು.