ಹೊಸದಿಗಂತ ವರದಿ, ಕಲಬುರಗಿ
ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 39 ಜನ ಲಿಂಗಾಯತ ಸಮುದಾಯದ ನಾಯಕರುಗಳು ಆಯ್ಕೆಗೊಂಡಿದ್ದು,ಹೀಗಾಗಿ ಲಿಂಗಾಯತ ಸಮುದಾಯದವರನ್ನೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಕೊಡಲಹಂಗರಗಾ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಬಹುಸಂಖ್ಯಾತ ಇರುವ ಲಿಂಗಾಯತ ಸಮುದಾಯದ 39 ಜನ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.ಅದರಲ್ಲಿ ಸಮಾಜದ ಹಿರಿಯರಾದ ಶಾಮನೂರ ಶಿವಶಂಕರಪ್ಪಾ, ಎಂ.ಬಿ.ಪಾಟೀಲ್, ಹಾಗೂ ಈಶ್ವರ ಖಂಡ್ರೆ ಆಯ್ಕೆಯಾಗಿದ್ದು,ಇವುರುಗಳಲ್ಲಿ ಯಾರಿಗಾದರೂ ಒಬ್ಬರನ್ನು ಮುಖ್ಯಮಂತ್ರಿಯಾಗಿ ಪರಿಗಣಿಸಿ,ಸಮುದಾಯವನ್ನು ಎತ್ತಿ ಹಿಡಿಯಬೇಕು ಎಂದರು.
ರಾಜ್ಯದ ಜನರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ ನೀಡಿದ್ದಾರೆ. ರಾಜ್ಯದಲ್ಲಿ ಬಹುಸಂಖ್ಯಾತ ಲಿಂಗಾಯತ ಮತದಾರರ ಆಶೀರ್ವಾದದ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು,ಲಿಂಗಾಯರನ್ನೆ ರಾಜ್ಯದ ಮುಖ್ಯಮಂತ್ರಿಯಾಗಿ ಮಾಡುವ ಮೂಲಕ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಸಹ ನಾಲ್ಕು ಜನ ಲಿಂಗಾಯತ ಶಾಸಕರು ಆಯ್ಕೆಗೊಂಡಿದ್ದು,ಸೇಡಂ ಕ್ಷೇತ್ರದಿಂದ ಶರಣಪ್ರಕಾಶ್ ಪಾಟೀಲ್, ಆಳಂದ ಕ್ಷೇತ್ರದಿಂದ ಬಿ.ಆರ.ಪಾಟೀಲ್, ಅಫಜಲಪುರ ದಿಂದ ಎಂ.ವೈ.ಪಾಟೀಲ್ ಹಾಗೂ ಕಲಬುರಗಿ ದಕ್ಷಿಣದಿಂದ ಅಲ್ಲಂಪ್ರಭು ಪಾಟೀಲ್ ಗೆದ್ದಿದ್ದಾರೆ. ಹೀಗಾಗಿ ಇವರುಗಳನ್ನು ಸಹ ಪರಿಗಣಿಸಿ,ಜಿಲ್ಲೆಗೆ ಮೂರು ಸಚಿವ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿದರು.