ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ಶ್ರೀರಾಮನಿಗೆ ನಮನ ಸಲ್ಲಿಸಲಿದ್ದಾರೆ, ಇದರ ಬೆನ್ನಲ್ಲೇ, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳದಿರಲು ತೀರ್ಮಾನಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜನವರಿ 22 ರಂದು ಕೋಲ್ಕತ್ತಾದಲ್ಲಿ ಸರ್ವಧರ್ಮ ಸಭೆ ನಡೆಸಲಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಪತ್ರಿಕಾಗೋಷ್ಠಿಯಲ್ಲಿ ಸರ್ವಧರ್ಮ ಸಮ್ಮೇಳನ ಕುರಿತು ಮಾಹಿತಿ ನೀಡಿದರು. “ಜನವರಿ 22 ರಂದು ನಾನು ಕಾಳಿಘಾಟ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಸರ್ವಧರ್ಮ ಸಭೆಯನ್ನು ಉದ್ಘಾಟಿಸುತ್ತೇನೆ. ಎಲ್ಲ ಧರ್ಮದವರೂ ಸಭೆಯಲ್ಲಿ ಪಾಲ್ಗೊಳ್ಳಬೇಕು. ಸಭೆಯು ಕಾಲಿಘಾಟ್ ಹಜ್ರಾದಿಂದ ಪ್ರಾರಂಭವಾಗಿ ಸರ್ಕಸ್ ಪಾರ್ಕ್ ಕಡೆಗೆ ಮುಂದುವರಿಯುತ್ತದೆ. ಎಲ್ಲಾ ಪ್ರಾದೇಶಿಕ ನಾಯಕರು ಅದಕ್ಕೆ ಸಿದ್ಧರಾಗಬೇಕೆಂದು ನಾನು ವಿನಂತಿಸುತ್ತೇನೆ. ದೇವಾಲಯಗಳು, ಚರ್ಚ್ಗಳು, ಗುರುದ್ವಾರಗಳು ಮತ್ತು ಮಸೀದಿಗಳಿಗೆ ಭೇಟಿ ನೀಡುವ ಮೂಲಕ ರ್ಯಾಲಿ ಮುಂದುವರಿಯುತ್ತದೆ ಎಂದು ಅವರು ಹೇಳಿದರು.