ಹೊಸ ದಿಗಂತ ವರದಿ, ಚಿತ್ರದುರ್ಗ:
ರಾಜ್ಯದಲ್ಲಿ ಈಗಿನ ಆಡಳಿತದಲ್ಲಿ ಗೊಂದಲ ಸೃಷ್ಟಿ ಆಗುತ್ತಿದೆ. ಮನುಷ್ಯ ನಂಬಿದ ಪ್ರೀತಿ, ಧರ್ಮಕ್ಕೆ ಅಶಾಂತಿ ಸೃಷ್ಠಿಯಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹೊಸದುರ್ಗ ಪಟ್ಟಣದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಸವಣ್ಣ, ಕುವೆಂಪು, ಶಿಶುನಾಳ ಶರೀಫರ ಕರ್ನಾಟಕ ಆಗಬೇಕೆಂದು ನಾವು ಬಯಸುತ್ತೇವೆ. ಬಸವಣ್ಣ, ಟಿಪ್ಪು, ಕುವೆಂಪು, ನಾರಾಯಣ ಗುರು, ಭಗತ್ ಸಿಂಗ್ ಬಗ್ಗೆ ಗೊಂದಲ ಸೃಷ್ಟಿಯಾಗುತ್ತಿದೆ ಎಂದರು.
ಭಗೀರಥ ಗುರುಪೀಠದಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಕೆಪಿಸಿಸಿ ಡಿ.ಕೆ.ಶಿವಕುಮಾರ್, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪಗೆ ಭಾವಿ ಶಾಸಕ ಎಂದು ಸಂಬೋಧಿಸಿದರು. ಬರುವ ಚುನಾವಣೆಯಲ್ಲಿ ಗೋವಿಂದಪ್ಪಗೆ ಟಿಕೆಟ್ ಪಕ್ಕಾ ಎಂದ ಅವರು, ಯಾರು ಬಾವಿ ಶಾಸಕ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಉಪ್ಪಾರ ಜನಾಂಗದ ಶಕ್ತಿ ಪ್ರದರ್ಶನ ನಡೆಯುತ್ತಿದೆ. ನಾನು, ಸಿದ್ದರಾಮಯ್ಯ 300 ಕಿ.ಮೀ. ದೂರದ ಕಾರ್ಯಕ್ರಮಕ್ಕೆ ಬಂದಿದ್ದೇವೆ. ನಿಮ್ಮಿಂದ ಜೈಕಾರ, ಚಪ್ಪಾಳೆಗಾಗಿ ನಾವುಗಳು ಬಂದಿಲ್ಲ. ಸಮಾಜದ ಜತೆಗೆ ನಾವಿದ್ದೇವೆ ಎಂದು ಹೇಳಲು ಬಂದಿದ್ದೇವೆ ಎಂದು ಹೇಳಿದರು.
ಅಧಿಕಾರಕ್ಕೂ ಮುಂಚೆ ಕೊಟ್ಟ ಮಾತಿನಂತೆ ನಾವು ಅಧಿಕಾರಕ್ಕೆ ಬಂದ ಮೇಲೆ ನಡೆದಿದ್ದೇವೆ. ಸಿದ್ದರಾಮಯ್ಯ ಆಡಳಿತದಲ್ಲಿ ನುಡಿದಂತೆ ನಡೆದಿದ್ದೇವೆ. ಅಧಿಕಾರವಿದ್ದಾಗ ನಾವು ಏನು ಮಾಡುತ್ತೇವೆಂಬುದು ಮುಖ್ಯ. ಇತಿಹಾಸ ಬದಲಿಸಲು ಹೊರಟವರ ವಿರುದ್ಧ ಮಾತು ಶುರುವಾಗಿದೆ. ಸಿದ್ಧಗಂಗಾಶ್ರೀ, ಆದಿಚುಂಚನಗಿರಿ, ಸಾಣೇಹಳ್ಳಿ ಶ್ರೀಗಳ ಪಾದಗಳಿಗೆ ನಮಿಸುವೆ. ರಾಜ್ಯ ಉಳಿಯಬೇಕು, ಶಾಂತಿ ನೆಲೆಸಬೇಕು ಎಂದು ಮಾರ್ಮಿಕವಾಗಿ ನುಡಿದರು.