ಹೊಸದಿಗಂತ ವರದಿ ಮಡಿಕೇರಿ:
ತೋಟದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ಗುರುವಾರ ಬೆಳ್ಳಂಬೆಳಗ್ಗೆ ಪಾಲಿಬೆಟ್ಟ ಸಮೀಪದ ಎಮ್ಮಗುಂಡಿ ತೋಟದಲ್ಲಿ ನಡೆದಿದೆ.
ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಎಮ್ಮೆಗುಂಡಿ ತೋಟದ ನಿವಾಸಿ ಚೆಲ್ಲಮೇಸ್ತ್ರಿ(55) ಎಂಬವರೇ ಸಾವಿಗೀಡಾದವರು.
ಬೆಳಗ್ಗೆ ವಾಯು ವಿಹಾರಕ್ಕೆಂದು ಚೆಲ್ಲ ಮೇಸ್ತ್ರಿ ತೆರಳುತ್ತಿದ್ದಾಗ, ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ದಾಟುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿರುವುದಾಗಿ ಹೇಳಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿದ್ದು, ಘಟನಾ ಸ್ಥಳದ ಸಮೀಪದಲ್ಲೇ ಕಾಡಾನೆಗಳು ಬೀಡು ಬಿಟ್ಟಿರುವುದು ಗೋಚರಿಸಿದೆ.
ಘಟನಾ ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೆ, ಇನ್ನು ಎರಡು ದಿನಗಳಲ್ಲಿ ಸರಕಾರದಿಂದ 20ಲಕ್ಷ ರೂ.ಪರಿಹಾರ ದೊರಕಲಿದೆ ಎಂದು ತಿಳಿಸಿದರು. ಈ ಸಂದರ್ಭ ಹಾಜರಿದ್ದ ತೋಟ ಕಾರ್ಮಿಕರು ಕಾಡಾನೆ ಹಾವಳಿ ತಡೆಗಟ್ಟುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.