ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ನಾಗುರಿ ಪರಿಸರದಲ್ಲಿ ಸಂಭವಿಸಿದ ಆಟೋ ರಿಕ್ಷಾದಲ್ಲಿನ ಪ್ರೆಷರ್ ಕುಕ್ಕರ್ ಸ್ಫೋಟದ ತನಿಖೆ ಚುರುಕುಗೊಂಡಿದೆ. ಪ್ರಮುಖ ಆರೋಪಿಯ ವೈಯಕ್ತಿಕ ಮಾಹಿತಿಗಳನ್ನು ಪೊಲೀಸರು ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಆರೋಪಿಯ ನಿಜವಾದ ಹೆಸರು ಹಾಗೂ ಗುರುತು ಪತ್ತೆಯಾದ ನಂತರ, ಆತ ಬೇರೆ ಯಾವ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ. ಆ ಜಾಡನ್ನು ಹಿಡಿದು ತನಿಖೆ ನಡೆಯುತ್ತಿದೆ ಎಂದರು.
ಸದ್ಯ ಆರೋಪಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಕುಟುಂಬ ವರ್ಗದವರು ಆತನ ಗುರುತಿಸಿದ್ದಾರೆ.ರೋಪಿಯ ಸಂಪರ್ಕ ಯಾವ ಊರುಗಳಲ್ಲಿದೆ ಎಂಬುದರ ಮಾಹಿತಿಯೂ ಲಭಿಸಿದೆ. ಈ ಎಲ್ಲ ಮಾಹಿತಿಗಳನ್ನು ರಾಷ್ಟ್ರೀಯ ತನಿಖಾ ದಳ ಹಾಗೂ ಐಬಿಗೆ ನೀಡಲಾಗಿದೆ ಎಂದರು.
ಎಲ್ಲಾ ರೀತಿಯಲ್ಲೂ ತನಿಖೆ ಮುಂದುವರೆದಿದ್ದು, ವಿಷಯಗಳು ಲಭ್ಯವಾದ ನಂತರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಎಲ್ಲ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪೊಲೀಸರು, ಭಯೋತ್ಪಾದಕ ನಿಗ್ರಹ ದಳ, ಆಂತರಿಕ ಸುರಕ್ಷತಾ ವಿಭಾಗಗಳು ಸಂಯೋಜಿಸಿ ಕಾರ್ಯನಿರ್ವಹಿಸಬೇಕು. ತನಿಖೆಯನ್ನು ಚುರುಕುಗೊಳಿಸಿ, ಹಿಂದಿರುವ ಘಾತುಕ ಶಕ್ತಿಗಳನ್ನು ಬಹಿರಂಗಗೊಳಿಸಬೇಕು ಎಂದರು.