ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದು ಎರಡು ತಿಂಗಳು ಕಳೆದರೂ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ. ಹಲವು ಪ್ರದೇಶಗಳಲ್ಲಿ ನಿರಂತರವಾಗಿ ಹಿಂಸಾಚಾರದ ವರದಿಗಳು ಬರುತ್ತಿವೆ. ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇದೇ ವೇಳೆ ಮಣಿಪುರ ಹಿಂಸಾಚಾರದ ಕುರಿತು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ದೊಡ್ಡ ಹೇಳಿಕೆ ನೀಡಿದ್ದಾರೆ. ಈ ಹಿಂಸಾಚಾರವನ್ನು ಪೂರ್ವ ನಿಯೋಜಿತವಾಗಿ ಯೋಜಿಸಲಾಗುತ್ತಿದ್ದು, ಇದರಲ್ಲಿ ವಿದೇಶಿ ಶಕ್ತಿಗಳು ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಣಿಪುರವು ಮ್ಯಾನ್ಮಾರ್ನೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಚೀನಾ ಕೂಡ ಹತ್ತಿರದಲ್ಲಿದೆ. ನಮ್ಮ ಸುಮಾರು 398 ಕಿ.ಮೀ ಗಡಿಗಳು ಸುರಕ್ಷಿತವಾಗಿಲ್ಲ. ನಮ್ಮ ಗಡಿಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದರೂ ಸಹ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದರು.
ಮತ್ತೊಂದೆಡೆ, ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರ್ಮಾನೆ ಇತ್ತೀಚೆಗೆ ಮ್ಯಾನ್ಮಾರ್ಗೆ ಭೇಟಿ ನೀಡಿದ್ದರು. ಇಲ್ಲಿನ ಉನ್ನತ ನಾಯಕರನ್ನು ಭೇಟಿ ಮಾಡಿ ಗಡಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ವಿಚಾರಗಳು, ಗಡಿಯಲ್ಲಿ ಅಕ್ರಮ ಸಾಗಾಟ ಪ್ರಕರಣಗಳು, ಮಾದಕ ದ್ರವ್ಯ ಸಾಗಣೆ, ಕಳ್ಳಸಾಗಣೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಿದರು. ಉಭಯ ದೇಶಗಳು 1700 ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿರುವುದರಿಂದ ಭಾರತಕ್ಕೆ ಮ್ಯಾನ್ಮಾರ್ ಮುಖ್ಯವಾಗಿದೆ. ಮ್ಯಾನ್ಮಾರ್ನಲ್ಲಿ ನಡೆಯುವ ಯಾವುದೇ ಘಟನೆಯು ಭಾರತದ ಗಡಿ ಪ್ರದೇಶದ ಮೇಲೆ ನೇರ ಪರಿಣಾಮ ಬೀರುತ್ತದೆ.