ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರವಾಡದಿಂದ ಬೆಂಗಳೂರಿಗೆ ಚಲಿಸುತ್ತಿದ್ದ ನೂತನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು, ರೈಲಿನ ಸಿ4 ಕೋಚ್ನ ಗಾಜಿನ ಕಿಟಕಿಗೆ ಹಾನಿಯಾಗಿದೆ.
ದಾವಣಗೆರೆ ನಗರದ ಕರೂರು- ದೇವರಾಜ ಅರಸ್ ಬಡಾವಣೆ ಮಾರ್ಗಮಧ್ಯೆ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ರೈಲು ಕರೂರು ಗೂಡ್ಸ್ ಶೆಡ್ ಕಡೆಯಿಂದ ದೇವರಾಜ ಅರಸು ಬಡಾವಣೆ ಮಾರ್ಗವಾಗಿ ಚಲಿಸುತ್ತಿರುವ ವೇಳೆ ರೈಲಿನ ಎಡಬದಿಗೆ ಯಾರೋ ಕಿಡಿಗೇಡಿಗಳು ಬಲವಾಗಿ ಕಲ್ಲು ಹೊಡೆದಿದ್ದಾರೆ. ಕಲ್ಲೇಟಿನಿಂದ ರೈಲಿನ 3 ಹಾಗೂ 4ನೇ ಬೋಗಿಯ ಗಾಜು ಹೊರಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದಂತೆ ರೈಲ್ವೆ ಅಧಿಕಾರಿಗಳು ಕಿಟಕಿ ಪರಿಶೀಲನೆ ನಡೆಸಿದರು. ಬಳಿಕ ದಾವಣಗೆರೆ ರೈಲ್ವೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸ್ ಅಧಿಕಾರಿಗಳಾದ ಕೋನ ರೆಡ್ಡಿ ಹಾಗೂ ಸಿಬ್ಬಂದಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರಯಾಣಿಕರು ಕೂಡ ಘಟನೆಯಿಂದ ಕೆಲಕಾಲ ಆತಂಕಗೊಂಡ ದೃಶ್ಯ ಕಂಡುಬಂದಿದೆ.
ಧಾರವಾಡ ಮಧ್ಯೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ಜರುಗಿದ್ದು, ರೈಲ್ವೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕ ಆಸ್ತಿ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.