ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಹಿಂಸಾಚಾರಕ್ಕೆ (Manipur Violence) ಸಂಬಂಧಿಸಿದ ಪ್ರಕರಣಗಳ ಪೊಲೀಸ್ ತನಿಖೆಯ ಮೇಲ್ವಿಚಾರಣೆಗೆ ಮಹಾರಾಷ್ಟ್ರದ ಮಾಜಿ ಡಿಜಿಪಿ ದತ್ತಾತ್ರೇ ಪಡಸಾಲ್ಗಿಕರ್ (Dattatrey Padsalgikar) ಅವರನ್ನು ಸುಪ್ರೀಂಕೋರ್ಟ್ (Supreme Court) ಸೋಮವಾರ ನೇಮಕ ಮಾಡಿದೆ.
ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠವು ಕಾನೂನಿನಲ್ಲಿ ವಿಶ್ವಾಸ ಮತ್ತು ನಂಬಿಕೆಯನ್ನು ಪುನಃಸ್ಥಾಪಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಹೇಳಿದೆ.
ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಪರೇಡ್ ಮಾಡುವುದು ಸೇರಿದಂತೆ 11 ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗಾಗಿ ಸಿಬಿಐ ತನಿಖಾ ತಂಡಕ್ಕೆ ವಿವಿಧ ರಾಜ್ಯಗಳ ಐದು ಅಥವಾ ಆರು ಡೆಪ್ಯುಟಿ ಎಸ್ಪಿ ಶ್ರೇಣಿಯ ಅಧಿಕಾರಿಗಳನ್ನು ಸೇರಿಸಲು ಕರಡು ಸಿದ್ಧಪಡಿಸಲು ನ್ಯಾಯಾಲಯ ಹೇಳಿದೆ.
ಪರಿಹಾರ, ಪುನರ್ವಸತಿ, ಮನೆ ಮತ್ತು ಪೂಜಾ ಸ್ಥಳಗಳ ಮರುನಿರ್ಮಾಣಕ್ಕಾಗಿ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯನ್ನು ರಚಿಸುವುದಾಗಿ ಹೇಳಿದೆ. ಪ್ರಸ್ತಾವಿತ ತ್ರಿಸದಸ್ಯ ಸಮಿತಿಯು ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರ ನೇತೃತ್ವದಲ್ಲಿರುತ್ತದೆ. ಮಾಜಿ ನ್ಯಾಯಾಧೀಶರಾದ ಶಾಲಿನಿ ಪಿ ಜೋಶಿ ಮತ್ತು ಆಶಾ ಮೆನನ್ ಈ ಸಮಿತಿಯಲ್ಲಿರಲಿದ್ದಾರೆ.
ಮಹಿಳಾ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯನ್ನು ಕಾನೂನಿನ ನಂಬಿಕೆಯನ್ನು ಖಚಿತಪಡಿಸಿಕೊಳ್ಳಲು ರಚಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ ನ್ಯಾಯಪೀಠ ಹೇಳಿದೆ