ಹೊಸದಿಗಂತ ವರದಿ, ಬಳ್ಳಾರಿ:
ಅಕ್ಕಿ ವ್ಯಾಪಾರಿ, ರಿಯಲ್ ಎಸ್ಟೇಟ್ ಉದ್ಯಮಿಯೋಬ್ಬರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ ಘಟನೆ ನಗರದ ರೇಡಿಯೋ ಪಾರ್ಕ್ ಬಳಿ ಬುಧವಾರ ಬೆಳಗಿನ ಜಾವ ನಡೆದಿದೆ. ನಗರದ ಮಂಜುನಾಥ್ (ಕುಂಟ ಮಂಜು) (33) ಕೊಲೆಯಾದ ದುರ್ದೈವಿ. ಘಟನೆ ಸುದ್ದಿತಿಳಿಯುತ್ತಿದ್ದಂತೆ ಎಸ್ಪಿ ಸೈದಲು ಅಡಾವತ್ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಲೆ ಯಾರು ಮಾಡಿದ್ದು ಎನ್ನುವುದು ಪತ್ತೆಯಾಗಿಲ್ಲ. ಆದರೇ, ಕೊಲೆ ನಡೆದ ಸ್ಥಳದಲ್ಲಿ ಇದ್ದ ಸಿಸಿ ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣ ಕೌಲ್ ಬಜಾರ್ ಠಾಣೆಯಲ್ಲಿ ದಾಖಲಾಗಿದೆ.
ಹತ್ಯಗೀಡಾದ ಮಂಜು ಅಲಿಯಾಸ್ ಕುಂಟ ಮಂಜು, ಅಕ್ಕಿ ವ್ಯಾಪಾರಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಇದರ ಜೊತೆ ಪಡಿತರ ಅಕ್ಕಿ ಅಕ್ರಮ ಸಾಗಣೆ ಆರೋಪವೂ ಇವರ ಮೇಲಿತ್ತು. ಸ್ಥಳದಲ್ಲಿ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹಲ್ಲೆ ನಡೆಯುತ್ತಿದ್ದಂತೆ ಪಕ್ಕದಲ್ಲಿದ್ದವರು ಪರಾರಿಯಾಗಿದ್ದಾರೆ. ಭೀಕರ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನಾ ಸ್ಥಳವನ್ನು ಕಾಲ್ ಬಜಾರ್ ಠಾಣೆ ಪೊಲೀಸರು ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.