ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂತ್ರಾಲಯದಲ್ಲಿ ಇಂದು ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಇಂದು ಆರಾಧನಾ ಮಹೋತ್ಸವದ ಕಡೆಯ ಘಟ್ಟವಾದ ಉತ್ತರಾಧನೆ ನಡೆಯಲಿದ್ದು, ಮಠದ ಬೀದಿ ಕಂಗೊಳಿಸುತ್ತಿದೆ. ಮಹಾರಥೋತ್ಸವಕ್ಕೂ ಮಠದ ಬೀದಿ ತಯಾರಾಗಿದ್ದು, ಸಾವಿರಾರು ಭಕ್ತರು ಭಾಗಿಯಾಗಲಿದ್ದಾರೆ.
ಗುರು ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದ ಮರುದಿನವನ್ನು ಉತ್ತರಾರಾಧನೆಯಾಗಿ ಆಚರಿಸಲಾಗುತ್ತದೆ. ಈ ದಿನ ರಾಯರು ಪ್ರಹ್ಲಾದ ರಾಜರ ಉತ್ಸವ ಮೂರ್ತಿ ರೂಪದಲ್ಲಿ ಹೊರಪ್ರಾಕಾರಕ್ಕೆ ಬಂದು ಭಕ್ತರಿಗೆ ದರುಶನ ನೀಡುತ್ತಾರೆ ಎನ್ನುವ ನಂಬಿಕೆ ಇದೆ. ಇದಕ್ಕೂ ಮುನ್ನ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಂಗಿನ ವಸಂತೋತ್ಸವ ಆಚರಣೆ ಮಾಡಲಿದ್ದಾರೆ. ರಾಯರ ವೃಂದಾವನಕ್ಕೆ ಗುಲಾ ಆಚರಣೆ ಎರಚಲಾಗುತ್ತದೆ.
ನಂತರ ಗುರುರಾಯರನ್ನು ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ನಂತರ ಮಠದ ಮದ್ವದ್ವಾರದಿಂದ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. ಈ ವೇಳೆ ವಿವಿಧೆಡೆಯಿಂದ ಆಗಮಿಸಿರುವ ಭಜನಾ ಮಂಡಳಿಗಳು ಹಾಗೂ ಕಲಾತಂಡಗಳು ರಥೋತ್ಸವಕ್ಕೆ ಮತ್ತಷ್ಟು ಮೆರಗು ನೀಡಲಿವೆ.



