ಹೊಸದಿಗಂತ ವರದಿ,ಗದಗ:
ಬಿಜೆಪಿ ಪಕ್ಷಕ್ಕೆ ಬರಲು ಸಾಕಷ್ಟು ಮುಖಂಡರುಗಳು ಸಿದ್ದರಿದ್ದಾರೆ. ಅವರು ಯಾರ್ಯಾರು ಎನ್ನವುದನ್ನು ಮುಂದಿನ ದಿನಗಳಲ್ಲಿ ಎಲ್ಲರಿಗೂ ತಿಳಿಯಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ನಗರದಲ್ಲಿ ಭಾನುವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಬಿಜೆಪಿ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿಕೊಂಡು ಬರುವವರ ಸಂಖ್ಯೆ ಸಾಕಷ್ಟಿದೆ. ಪಕ್ಷವು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಗ್ರಹಣ ಹಿಡಿದಿರುವದರಿಂದ ಅದು ರಾಜ್ಯದ ಅಭಿವೃದ್ದಿ ಕುರಿತು ಅಪಪ್ರಚಾರ, ಡೋಂಗಿತನ ಪ್ರದರ್ಶನ ಮಾಡುತ್ತಿದ್ದು ಈ ಕುರಿತು ಇದೇ ನ. 8 ರಂದು ಶಿರಹಟ್ಟಿಯಲ್ಲಿ ಜನಸಂಕಲ್ಪ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಅಭಿವೃದ್ದಿಯ ಕುರಿತು ವಿರಾಟ ದರ್ಶನ ಮಾಡಿಸಲಿದ್ದಾರೆ ಎಂದು ಹೇಳಿದರು.
ವಿರೋಧ ಪಕ್ಷಗಳು ರ್ಯಾಲಿ ಮಾಡಿದರೂ ತಪ್ಪೇನಿಲ್ಲ ರಾಜ್ಯಕ್ಕೆ ಪ್ರಬಲ ವಿರೋಧ ಪಕ್ಷ ಅಗತ್ಯವಾಗಿರುವದರಿಂದ ಎರಡು ವಿರೋಧ ಪಕ್ಷಗಳು ಕೂಡಿಕೊಂಡು ಹೋದರೆ ಸಾಕು. ಅದು ನಮಗೆ ಇಲ್ಲದೆ ಇರುವದರುವದರಿಂದ ಮುಂದಿನ ದಿನಗಳಲ್ಲಾದರೂ ಒಂದು ಪ್ರಬಲ ವಿರೋಧ ಪಕ್ಷ ಇರಲಿ ಎಂದು ಹೇಳಿದರು.
ಇಡಿ ಸ್ವಾಯತ್ತ ಸಂಸ್ಥೆಯಾಗಿರುವದರಿಂದ ಯಾರನ್ನು ಯಾವಾಗ ತನಿಖೆಗೆ ಒಳಪಡೆಸಬೇಕು ಎನ್ನುವದನ್ನು ಅದು ನಿರ್ಧರಿಸುತ್ತದೆ. ಈಗಾಗಲೇ ಡಿ.ಕೆ. ಶಿವಕುಮಾರ ಅವರು ಸಂಸ್ಥೆಯ ಮುಂದೆ ಉತ್ತರ ನೀಡಿ ಬಂದಿರುವದರಿಂದ ಮತ್ತೆ ಏನಾದರೂ ಸ್ಪಷ್ಟನೆ ಬೇಕಾದರೆ ಅವರನ್ನು ಕರೆಸುತ್ತಾರೆ ಇದೊಂದು ಪ್ರಕ್ರಿಯ ಅಷ್ಟೆ ಅದಕ್ಕೆ ಹಾಗೂ ನಮ್ಮ ಪಕ್ಷಕ್ಕೆ, ಸರಕಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಕಳೆದ ಬಾರಿ ಗದಗ ವಿಧಾನಸಭೆ ಚುನಾವಣೆಯಲ್ಲಿ ಕೂದಲೆಳೆಯ ಅಂತರದಿಂದ ಸ್ಥಾನವನ್ನು ಕಳೆದುಕೊಂಡಿದ್ದು ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಈ ಬಾರಿ ನಾಲ್ಕು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಎಂಸಿಎ ಅಧ್ಯಕ್ಷ ಎಂ.ಎಸ್.ಕರಿಗೌಡ್ರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ಮುಖಮಡರಾದ ರಾಜು ಕುರಡಗಿ, ಎಂ.ಎಂ.ಹಿರೇಮಠ, ಶ್ರೀಪತಿ ಉಡುಪಿ ಸೇರಿದಂತೆ ಮುಂತಾದವರು ಇದ್ದರು.