ಹೊಸದಿಗಂತ ವರದಿ ಹಾಸನ :
ಬೇಲೂರು ಪಟ್ಟಣದ ಬಸ್ ನಿಲ್ದಾಣ ಮುಂಭಾಗ ಇತ್ತೀಚೆಗೆ ಕಟ್ಟಡ ಕುಸಿತದಿಂದ ಹಣ್ಣಿನ ವ್ಯಾಪಾರಿಯಾಗಿದ್ದ ಜ್ಯೋತಿ ಮೃತಪಟ್ಟಿದ್ದರು. ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಗಣಿತಶಿಕ್ಷಕರೊಬ್ಬರು ಆಸರೆಯಾಗಿದ್ದಾರೆ.
ಗಣಿತ ಮೇಷ್ಟ್ರಾದ ಹೆಚ್ ಪಿ. ಗಿರೀಶ್ ಅವರು ಇತರರ ನೆರವಿನೊಂದಿಗೆ 75 ಸಾವಿರ ರೂಪಾಯಿಗಳನ್ನು ಮಕ್ಕಳಿಗೆ ನೀಡಿದ್ದಾರೆ. ಅದನ್ನು ವಿದ್ಯಾಭ್ಯಾಸಕ್ಕೆ ಬಳಸುವಂತೆ ಹೇಳಿದ್ದಾರೆ.
ಬೇಲೂರಿನ ಬಸ್ ನಿಲ್ದಾಣದ ಎದುರು ಮಾರ್ಚ್ 9 ರಂದು, ಶಿಥಿಲಗೊಂಡ ಕಟ್ಟಡದ ಛಾವಣಿಯು ಕೆಲವು ವ್ಯಾಪಾರಿಗಳ ಮೇಲೆ ಕುಸಿದು ಬಿದ್ದ ಪರಿಣಾಮ ಇಬ್ಬರು ತಕ್ಷಣವೇ ಸಾವನ್ನಪ್ಪಿದರು, ಜ್ಯೋತಿ ಸೇರಿದಂತೆ ಕೆಲವರು ಗಾಯಗೊಂಡರು. ಜ್ಯೋತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಾರಿಯಾಗದೆ ಜ್ಯೋತಿ ನಿಧನರಾದರು.
ಜ್ಯೋತಿ ಅವರ ಪತಿ ಗೋಪಿ ಕೂಡ ಕೆಲವು ತಿಂಗಳ ಹಿಂದೆ ನಿಧನರಾಗಿದ್ದು, ಪೋಷಕರಿಲ್ಲದ ಮಕ್ಕಳಿಗೆ ಗಿರೀಶ್ ಸಹಾಯ ಮಾಡಿದ್ದಾರೆ. ಅವರ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.