ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಪುರುಷರಕಟ್ಟೆಯಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಯುವಕರು ದಾಖಲಿಸಿದ್ದ ಪ್ರತಿ ದೂರಿನ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದ ಯುವತಿ ಸೇರಿದಂತೆ ಆರು ಮಂದಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಘಟನೆಯ ಸಂಬಂಧ ಯುವತಿಯೊಬ್ಬರು, ಯುವಕನೊಬ್ಬ ಚಾಕು ಹಿಡಿದು ತಂಡದೊಂದಿಗೆ ವಾಹನದಲ್ಲಿ ಬಂದು ತಮ್ಮನ್ನು ಹಿಂಬಾಲಿಸಿ ದಾಳಿ ಮಾಡಲು ಯತ್ನಿಸಿದ್ದಾನೆ ಎಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಯುವಕರ ತಂಡ ಮತ್ತೊಂದು ದೂರು ದಾಖಲಿಸಿ, ಪ್ರಕರಣದ ನೈಜ ಸಂಗತಿಗಳು ತಿಳಿದಿದ್ದರೂ ಧಾರ್ಮಿಕ ದ್ವೇಷದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಆರೋಪಿಸಿತ್ತು. ಮಾತ್ರವಲ್ಲದೆ, ತಮ್ಮ ದೂರಿನಲ್ಲಿ ಹಿಂದೂ ಸಂಘಟನೆಯ ಮುಖಂಡ ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ಇತರರ ವಿರುದ್ಧವೂ ಆರೋಪ ಮಾಡಲಾಗಿತ್ತು.
ಇದನ್ನೂ ಓದಿ:
ಯುವಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸಂತ್ರಸ್ತ ಯುವತಿ, ಆಕೆಯ ತಂದೆ, ಮುರಳಿಕೃಷ್ಣ ಹಸಂತಡ್ಕ, ಪುರುಷೋತ್ತಮ ಗೌಡ ಮುಂಗ್ಲಿಮನೆ, ಜಯರಾಮ ಡಿ. ಹಾಗೂ ಆನಂದ ಗೌಡ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯವು ಎಲ್ಲಾ ಆರು ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಮಾಧವ ಪೂಜಾರಿ ಹಾಗೂ ರಾಕೇಶ್ ಬಲ್ನಾಡು ವಾದ ಮಂಡಿಸಿದರು.



