ತಲೆ ಸಿಡೀತಿದೆ, ಬಾತ್ರೂಂನಲ್ಲಿ ಜಾರಿ ಬಿದ್ನಲ್ಲ ಮೂಳೆ ಮುರ್ದಿದೆ ಅಂತೆ, ಜ್ವರ ಜಾಸ್ತಿನೇ ಇತ್ತು ಹಾಸ್ಪಿಟಲ್ಗೆ ಹೋಗಿಬಂದೆ, ತಲೆಗೆ ಪೆಟ್ಟು ಬಿದ್ದಿದ್ದು, ಹೆಂಗಾದ್ರು ಆಗ್ಲಿ ಅಂತ ಒಂದ್ ಸ್ಕಾನ್ ಮಾಡ್ಸ್ಕೊಂಡು ಬಂದೆ, ವ್ಯಾಕ್ಸಿನ್ ಬಂದಿದೆ, ಫಸ್ಟ್ ಹಾಕಿಸ್ಕೊಂಡು ಬನ್ನಿ…..
ದೈಹಿಕ ಆರೋಗ್ಯಕ್ಕೆ ಎಷ್ಟೆಲ್ಲಾ ಮನ್ನಣೆ ಅಲ್ವಾ? ಯಾಕಂದ್ರೆ ನೋವು ಕಣ್ಣೆದುರೇ ಇದೆ, ಆದರೆ ಮಾನಸಿಕ ಸಮಸ್ಯೆಗಳು? ಮನಸ್ಸಿನಲ್ಲಿ ಅನುಭವಿಸೋ ಕಿರಿಕಿರಿ, ಸಿಕ್ಕವರ ಮೇಲೆಲ್ಲಾ ಕೋಪ, ತರಕಾರಿ ಅಣ್ಣನಿಂದಲೂ ನಿರೀಕ್ಷೆಗಳು, ಗಂಡ ಮುಟ್ಟಿದರೂ ಸಿಟ್ಟು, ಮುಟ್ಟದಿದ್ದರೂ ಕೋಪ, ಮೂಡ್ ಇಲ್ಲ ಅಂತ ಟ್ರಿಪ್ ಕ್ಯಾನ್ಸಲ್ ಮಾಡಿದ್ದು, ಮನೆ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದು, ತಿಂಗಳುಗಟ್ಟಲೆ ನಿದ್ದೆ ಇಲ್ಲದೆ ಇರೋದು.. ಇವು ಕೂಡ ಸಮಸ್ಯೆಗಳೇ! ಹೌದು, ಮೂಡ್ ಇಲ್ಲ ಎಂದರೆ ಎದ್ದು ಹೊರಗೆ ಹೋಗಿ ಬಾ ಎಲ್ಲಾ ಮೂಡ್ ಸರಿಯಾಗುತ್ತದೆ ಅನ್ನೋ ಉತ್ತರ ಸಿಗುತ್ತದೆ ಆದರೆ ವೈದ್ಯರನ್ನು ಭೇಟಿ ಮಾಡು, ಕನ್ಸಲ್ಟೆನ್ಸಿ ತಗೋ ಅನ್ನೋರು ಅತಿ ವಿರಳ
ಮಾನಸಿಕ ಆರೋಗ್ಯವೇ ಆಗಲಿ ದೈಹಿಕ ಆರೋಗ್ಯವೇ ಆಗಲಿ, ನಿಮ್ಮ ಆರೋಗ್ಯ ನೀವು ನೋಡಿಕೊಳ್ಳಬೇಕು, ಅದಕ್ಕೂ ಬೇರೆಯವರನ್ನು ದೂರೋದು, ಬೇರೆಯವರ ಮೇಲೆ ಡಿಪೆಂಡ್ ಆಗೋದು ಒಳ್ಳೆಯದಲ್ಲ. ಬೇರೆಯವರು ನಿಮ್ಮ ತಂದೆ-ತಾಯಿ, ಗಂಡ-ಹೆಂಡತಿ, ಮಕ್ಕಳು, ಸ್ನೇಹಿತರೂ ಆಗಿರಬಹುದು.
ಮಾನಸಿಕ ಆರೋಗ್ಯ ವೃದ್ಧಿಗೆ ಹೀಗೆ ಮಾಡಿ ನೋಡಿ..
- ಭಾವನೆಗಳನ್ನು ಮುಕ್ತವಾಗಿ ಹೊರಗೆ ಹಾಕಿ. ಹೌದು, ಎಮೋಷನ್ಗಳನ್ನು ಡಬ್ಬಿಯಲ್ಲಿಟ್ಟು ಮುಚ್ಚುಳ ಹಾಕುವುದನ್ನು ನಿಲ್ಲಿಸಿ, ಓಪನ್ ಆಗಿ ಮಾತನಾಡಿ, ಅನಿಸಿದ್ದನ್ನು ಹಂಚಿಕೊಳ್ಳಿ. ನಿಮ್ಮ ಅನಿಸಿಕೆ ಮೇಲೆ ದೃಢವಾಗಿ ನಿಂತುಕೊಳ್ಳಿ.
- ಜೀವನಕ್ಕೆ ಬೌಂಡರಿಗಳಿರಲಿ. ಪ್ರತಿಯೊಂದಕ್ಕೂ, ಪ್ರತಿಯೊಬ್ಬರಿಗೂ ಎಲ್ಲದಕ್ಕೂ ಒಕೆ, ಸರಿ, ಮಾಡ್ತೇನೆ ಎಂದು ಹೇಳಬೇಕಿಲ್ಲ. ಆಗದ್ದನ್ನು ಆಗದು ಎಂದು ಹೇಳಿಬಿಡಿ. ನೋ ಎಂದು ಹೇಳೋದು ಕಷ್ಟ ಇರಬಹುದು, ಆದರೆ ಇದನ್ನೇ ಅವರ ಲಾಭಕ್ಕಾಗಿ ಬಳಸುವ ಜನರಿದ್ದಾರೆ. ಇಷ್ಟವಿಲ್ಲದನ್ನು ಒಪ್ಪಿ ವಿಲಿವಿಲಿ ಒದ್ದಾಡೋ ಬದಲು ಆಗೋದಿಲ್ಲ ಎಂದು ಹೇಳಿಬಿಡಬಹುದಲ್ಲಾ?
- ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಒಂದಕ್ಕೊಂದು ಸಂಬಂಧಿತವಾಗಿದೆ, ಹುಷಾರಿಲ್ಲ ಎಂದರೆ ಮೂಡ್ ಸರಿ ಇರೋದಿಲ್ಲ, ದೇಹ ನಿಮ್ಮ ಮನಸ್ಸಿನ ಜೊತೆ ನಡೆಯೋದಕ್ಕೆ ಆಗೋದಿಲ್ಲ. ಒತ್ತಡ ದೂರ ಮಾಡೋಕೆ ಆರೋಗ್ಯವಾಗಿರೋದು ಒಳ್ಳೆಯದು.
- ಕೆಲವರಿಗೆ ಒತ್ತಡದಲ್ಲಿದ್ದರೆ ಕ್ಲೀನಿಂಗ್ ಮಾಡೋ ಹುಚ್ಚು, ಕೆಲವರಿಗೆ ಬ್ಯಾಟ್ಮಿಟನ್, ಕೆಲವರಿಗೆ ತಿಂಡಿ ತಿನ್ನೋದು, ಶಾಪಿಂಗ್ ಮಾಡೋದು, ಪೇಂಟಿಂಗ್ ಹೀಗೆ.. ನಿಮ್ಮ ಒತ್ತಡ ನಿವಾರಣೆಗೆ ಉತ್ತಮವಾದ ಅಭ್ಯಾಸ ರೂಢಿಸಿಕೊಳ್ಳಿ, ಧ್ಯಾನ್, ಯೋಗ, ಮ್ಯೂಸಿಕ್ ಹೀಗೆ…
- ಸಹಾಯ ಕೇಳೋದು ಎಂದರೆ ನೀವು ಕೈಲಾಗದವರು ಎಂದರ್ಥ ಅಲ್ಲ! ಎಲ್ಲಾ ವಿಷಯಗಳನ್ನೂ ಬಲ್ಲವರು ನೀವಲ್ಲ, ಯಾರೂ ಅಲ್ಲ, ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಹೋದರೆ ಹಾಯಾದ ಜೀವನ ಸಾಧ್ಯ. ಸ್ನೇಹಿತರು, ಕುಟುಂಬದವರ ಬಳಿ ಸಹಾಯ ಕೇಳೋದಕ್ಕೆ ಗಿಲ್ಟ್ ಬೇಡ.
- ವೈದ್ಯರನ್ನು, ಸೈಕಿಯಾಟ್ರಿಸ್ಟ್ನ್ನು ಭೇಟಿ ಮಾಡೋದಕ್ಕೆ ಹಿಂಜರಿಕೆ ಬೇಡ, ಹುಚ್ಚರು ಎನ್ನುತ್ತಾರೆ ಎನ್ನುವ ಭಯ ಇಟ್ಟುಕೊಳ್ಳಬೇಡಿ, ಕಾಲ ಬದಲಾಗಿದೆ ದೇಹಕ್ಕೆ ಬೇಕಾದಷ್ಟೇ ಚಿಕಿತ್ಸೆ ಮನಸ್ಸಿಗೂ ಬೇಕಿದೆ. ಸಹಾಯ ಬೇಕೆನಿಸಿದಾಗ ಸೈಕಿಯಾಟ್ರಿಸ್ಟ್ನ್ನು ಕನ್ಸಲ್ಟ್ ಮಾಡೋದಕ್ಕೆ ಹಿಂದೆಮುಂದೆ ನೋಡಬೇಡಿ. ಆರೋಗ್ಯವೇ ಭಾಗ್ಯ ನೆನಪಿರಲಿ. ಆರೋಗ್ಯವಾಗಿದ್ದಾಗ ಉಳಿದೆಲ್ಲ ಸಮಸ್ಯೆ ದೊಡ್ಡದಾಗಿ ಕಾಣುತ್ತದೆ, ಆದರೆ ಆರೋಗ್ಯ ಕೈ ಕೊಟ್ಟಾಗ ಅದೇ ಅತಿ ಮುಖ್ಯವಾಗುತ್ತದೆ.