ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದ ರಾಜೌರಿಯಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯು (ಸಿಆರ್ಪಿಎಫ್) ಕಣಿವೆಗೆ ಹೆಚ್ಚುವರಿಯಾಗಿ 1,800 ಯೋಧರನ್ನು ಕಳುಹಿಸಲು ತೀರ್ಮಾನಿಸಿದೆ.
ಪೂಂಚ್ ಹಾಗೂ ರಾಜೌರಿ ಜಿಲ್ಲೆಗಳಲ್ಲಿ ನಿಯೋಜಿಸಲೆಂದೇ ಸಿಆರ್ಪಿಎಫ್ನ 18 ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. ಒಂದು ತುಕಡಿಯಲ್ಲಿ 100 ಸೈನಿಕರು ಇರಲಿದ್ದಾರೆ. ಈಗಾಗಲೇ ಒಂಬತ್ತು ತುಕಡಿಗಳು ರಾಜೌರಿ ಜಿಲ್ಲೆಯನ್ನು ತಲುಪಿವೆ. ಉಳಿದ ತುಕಡಿಗಳು ಶೀಘ್ರದಲ್ಲೇ ತೆರಳಲಿವೆ. ಇವರು ಎರಡೂ ಜಿಲ್ಲೆಗಳಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜೌರಿ ಜಿಲ್ಲೆಯ ಧಾಂಗ್ರಿ ಗ್ರಾಮದಲ್ಲಿ ಹಿಂದುಗಳನ್ನು ಗುರಿಯಾಗಿಸಿ ಇತ್ತೀಚೆಗೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಜನವರಿ ಒಂದರಂದು ದಾಳಿಯಲ್ಲಿ ನಾಲ್ವರು ಹಾಗೂ ಜನವರಿ 2ರಂದು ನಡೆದ ದಾಳಿಯಲ್ಲಿ ಇಬ್ಬರು ಹಿಂದುಗಳು ಮೃತಪಟ್ಟಿದ್ದರು.