ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಡಿನಂಚಿನ ಗ್ರಾಮಗಳಿಗೆ ರಾತ್ರಿಯ ವೇಳೆಗೆ ಬದಲಾಗಿ ಹಗಲು ಹೊತ್ತಿನಲ್ಲಿ 3 ಫೇಸ್ ವಿದ್ಯುತ್ (Three phase power) ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Minister Ishwar Khandre) ಮನವಿ ಮಾಡಿದ್ದಾರೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಈಶ್ವರ ಖಂಡ್ರೆ, ರಾಜ್ಯಾದ್ಯಂತ ಕಾಡಿನಂಚಿನಲ್ಲಿರುವ ಪ್ರದೇಶಗಳಿಗೆ ಆನೆ, ಹುಲಿ, ಚಿರತೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಾಣ ಹಾನಿ ಆಗುತ್ತಿದೆ. ರಾತ್ರಿಯ ವೇಳೆ 3 ಫೇಸ್ ವಿದ್ಯುತ್ ಪೂರೈಕೆ ಮಾಡಿದರೆ ರೈತರು ಪಂಪ್ ಸೆಟ್ ಆನ್ ಮಾಡಲು ಮತ್ತು ಆಫ್ ಮಾಡಲು ರಾತ್ರಿಯ ವೇಳೆ ಸಂಚರಿಸುವ ಕಾರಣ ಸಂಘರ್ಷಗಳು ಹೆಚ್ಚುತ್ತವೆ. ಹೀಗಾಗಿ ಬೆಳಗಿನ ಹೊತ್ತು 3 ಫೇಸ್ ವಿದ್ಯುತ್ ಪೂರೈಸುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕಾಡಂಚಿನ ಗ್ರಾಮಗಳಿಗೆ ರಾತ್ರಿಯ ವೇಳೆ 3 ಫೇಸ್ ವಿದ್ಯುತ್ ಪೂರೈಸದೆ, ಬೆಳಗ್ಗೆ ಹೊತ್ತಿನಲ್ಲಿಯೇ ನಿಗದಿತ ಸಮಯಕ್ಕನುಸಾರವಾಗಿ 3 ಫೇಸ್ ವಿದ್ಯುತ್ ನೀಡುವಂತೆ ಇಂಧನ ಇಲಾಖೆಗೆ ನಿರ್ದೇಶನ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಕೋರಿದ್ದಾರೆ.