ಹೊಸದಿಗಂತ ವರದಿ ಹಾವೇರಿ:
ಯಾವುದೇ ರೈತರು ಬೇಕೆಂತಲೇ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಜೀವನದ ಅನಿವಾರ್ಯತೆಗಳಿಂದ ಬೇಸತ್ತು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಆದರೆ ಪರಿಹಾರಕ್ಕಾಗಿ ಅಲ್ಲ ಎಂದು ರೈತ ಮುಖಂಡರು ಸಚಿವ ಶಿವಾನಂದ ಪಾಟೀಲ ಅವರಿಗೆ ಘೇರಾವ್ ಹಾಕಿದರು.
ಮಂಗಳವಾರ ಜಿಲ್ಲಾ ಗುರುಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮುಗಿಸಿ ಹೊರಬರುತ್ತಿದ್ದಂತೆಯೇ ಸಚಿವರನ್ನು ತಡೆದ ರೈತ ಮುಖಂಡರು ತಮ್ಮ ಹೇಳಿಕೆ ಹಿಂಪಡೆಯುವ ಕುರಿತು ಒತ್ತಾಯಿಸಿದರು.
ಮದ್ಯಪ್ರವೇಶಿಸಿದ ಉಪ ಸಭಾಪತಿ ರುದ್ರಪ್ಪ ಲಮಾಣಿ, ನಮಗೆ ರೈತರ ಬಗ್ಗೆ ಅಪಾರ ಕಾಳಜಿ ಇದೆ. ನಾವೂ ಕೂಡಾ ರೈತರೇ. ಅಂತಹ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿ, ನಮ್ಮ ಕಳಕಳಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಿಜವಾದ ರೈತರ ಮನೆಗೆ ಪರಿಹಾರ ತಲುಪಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಆದರೆ ಕೆಲ ಮಾಧ್ಯಮಗಳು ಇದನ್ನು ತಪ್ಪಾಗಿ ಅರ್ಥೈಸಿವೆ, ಅದು ಬೇಡ ಎಂದಷ್ಟೇ ನಾನು ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.
ಈ ವೇಳೆ ರೈತ ನಾಯಕರಾದ ರಾಕೇಶ್ ಸಜ್ಜನರ, ಹನುಮಂತಪ್ಪ ಕಬ್ಬಾರ, ಸುರೇಶ ಚಲವಾದಿ ಮತ್ತಿತರರು ಇದ್ದರು.