ಹೊಸದಿಗಂತ ತುಮಕೂರು:
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಶಕ್ತಿ ದೇವತೆ, 33 ಗ್ರಾಮಗಳ ಒಡತಿ ಶ್ರೀ ಕೆಂಪಮ್ಮ ದೇವಿ ದೇವಾಲಯಕ್ಕೆ ವಾಮಾಚಾರ ಮಾಡಿ ಬಾಗಿಲಿಗೆ ಬೆಂಕಿ ಹಚ್ಚಿರುವ ಘಟನೆ ಬೆಳಿಗ್ಗೆ ನಡೆದಿದೆ.
ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಟ್ನ ಗ್ರಾಮದ ಹೊರವಲಯದ ತೋಪಿನಲ್ಲಿ ಶ್ರೀ ಕೆಂಪಮ್ಮ ದೇವಿ ದೇವಾಲಯವಿದೆ. ಸಂಜೆ ಪೂಜೆ ನಂತರ ರಾತ್ರಿ ವೇಳೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಪಶ್ಚಿಮದ ಬಾಗಿಲಿಗೆ ವಾಮಾಚಾರ ಮಾಡಿದ್ದಾರೆ. ನಂತರದಲ್ಲಿ ವಾಮಾಚಾರದ ವಸ್ತುಗಳಿಗೆ ಬೆಂಕಿ ಹಚ್ಚಿದ್ದು ಅದು ಸಂಪೂರ್ಣ ಬಾಗಿಲಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಳಗಿನ ಜಾವ ಪೂಜಾ ಕೈಂಕರ್ಯಗಳನ್ನು ನಡೆಸಲು, ದೇವಾಲಯವನ್ನು ಸ್ವಚ್ಛತೆ ಮಾಡಲು ಬಂದಾಗ ಗ್ರಾಮಸ್ಥರು ನೋಡಿ ಬೆಂಕಿ ನಂದಿಸಿದ್ದಾರೆ. ಬಾಗಿಲು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಸ್ಥಳದಲ್ಲಿ ವಾಮಾಚಾರಕ್ಕೆ ಬಳಸಿದ್ದ ಬೊಂಬೆ, ವಾಮಾಚಾರ ವಸ್ತುಗಳು ಸುಟ್ಟು ಸ್ಥಿತಿಯಲ್ಲಿ ದೊರೆತಿದ್ದು ಸ್ಥಳೀಯ ಗ್ರಾಮಸ್ಥರು , ಭಕ್ತರಲ್ಲಿ ಆತಂಕ ಮೂಡಿಸಿದೆ.
ಸ್ಥಳಕ್ಕೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿದ್ದು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.