ಹೊಸದಿಗಂತ ವರದಿ, ಮಂಗಳೂರು:
ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಆರೋಪಿ ಆದಿಲ್ ಮೆಹರೂಫ್ ಎಂಬಾತ ಈ ಹಿಂದೆ ಕೊಲೆಯಾಗಿದ್ದ ಫಾಝಿಲ್ ಸಹೋದರನಾಗಿದ್ದು, ಕೃತ್ಯ ನಡೆಸಲು ೩ ಲಕ್ಷ ರೂ. ಹಣ ನೀಡಿದ್ದ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಬಜ್ಪೆ ಶಾಂತಿಗುಡ್ಡೆ ನಿವಾಸಿ, ಕಿನ್ನಿಪದವಿನಲ್ಲಿ ಬಾಡಿಗೆ ಮನೆಯಲ್ಲಿದ್ದ ಡ್ರೈವರ್ ಅಬ್ದುಲ್ ಸಫ್ವಾನ್ (೨೯), ಮೇಸಿ ಕೆಲಸ ಮಾಡಿಕೊಂಡಿದ್ದ ಶಾಂತಿಗುಡ್ಡೆ ನಿವಾಸಿ ನಿಯಾಜ್ (೨೮), ಶಾಂತಿಗುಡ್ಡೆ ನಿವಾಸಿ ಮೊಹಮ್ಮದ್ ಮುಜಾಮಿಲ್ (೩೨), ಕಳವಾರು ಕುರ್ಸಗುಡ್ಡೆ ನಿವಾಸಿ ಕಲಂದರ್ ಶಾಫಿ (೨೯), ಬಾಳ ಗ್ರಾಮ ಮಂಗಳಪೇಟೆ ನಿವಾಸಿ ಆದಿಲ್ ಮೆಹರೂಫ್ (೨೭), ಕಳಸ ರುದ್ರಪಾದೆಯ ರಂಜಿತ್ (೧೯), ಕಳಸ ಮಾವಿನಕೆರೆ ಗ್ರಾಮದ ನಾಗರಾಜ್ (೨೦), ಜೋಕಟ್ಟೆ ನಿವಾಸಿ ಮೊಹಮ್ಮದ್ ರಿಜ್ವಾನ್ (೨೮) ಬಂಧಿತರು.
ಸುಹಾಸ್ ಶೆಟ್ಟಿ ಸ್ನೇಹಿತರಾದ ಪ್ರಶಾಂತ್, ಧನರಾಜ್ ಸೇರಿ ಸಫ್ವಾನ್ ಮೇಲೆ ೨೦೨೩ರಲ್ಲಿ ಹಲ್ಲೆ ನಡೆಸಿದ್ದ ಆರೋಪವಿತ್ತು.
ಸುಹಾಸ್ ತನ್ನನ್ನು ಕೊಲೆ ಮಾಡುವ ಬಗ್ಗೆ ಸಫ್ವಾನ್ಗೆ ಆತಂಕವಿತ್ತು. ಈ ಹಿನ್ನೆಲೆಯಲ್ಲಿ ಸುಹಾಸ್ನನ್ನು ಕೊಲೆ ಮಾಡಲು ತೀರ್ಮಾನ ಮಾಡಿದ್ದ. ಈ ಬಗ್ಗೆ ಫಾಝಿಲ್ನ ಸಹೋದರನನ್ನು ಸಂಪರ್ಕಿಸಿ ಸುಹಾಸ್ನನ್ನು ಕೊಲೆ ಮಾಡುವ ಯೋಜನೆ ರೂಪಿಸಿದ್ದರು. ಸುಹಾಸ್ನನ್ನು ಕೊಲೆ ಮಾಡಲು ಐದು ಲಕ್ಷ ರೂ. ನೀಡುವುದಾಗಿ ಆದಿಲ್ ಮೆಹರೂಫ್ ಭರವಸೆ ನೀಡಿದ್ದ. ಸಹೋದರನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಆದಿಲ್ ೫ ಲಕ್ಷ ರು. ಸುಪಾರಿ ನೀಡಿದ್ದು, ಅದರಲ್ಲಿ ೩ ಲಕ್ಷ ರೂ.ಗಳನ್ನು ಮೊದಲೇ ಪಾವತಿಸಿದ್ದ. ಬಳಿಕ ಇದಕ್ಕಾಗಿ ತಂಡ ರಚನೆ ಮಾಡಿ, ಯೋಜನೆ ರೂಪಿಸಿದ್ದರು ಎಂದರು.
ಕೊಲೆಗೆ ಸುಪಾರಿ ಪಡೆದುಕೊಂಡ ಬಳಿಕ ಸಫ್ವಾನ್ ಕಳಸದಿಂದ ನಾಗರಾಜ್ ಮತ್ತು ರಂಜಿತ್ ಎಂಬವರನ್ನು ೧೦ ದಿನಗಳ ಮೊದಲೇ ಕರೆಸಿ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ. ಈ ೧೦ ದಿನಗಳಲ್ಲಿ ಸುಹಾಸ್ ಶೆಟ್ಟಿ ಮೇಲೆ ಈ ತಂಡ ಎರಡು- ಮೂರು ಬಾರಿ ಕೊಲೆಗೆ ಪ್ರಯತ್ನ ನಡೆಸಿದ್ದರೂ ಸಫಲವಾಗಿರಲಿಲ್ಲ. ಮೇ ೧ರಂದು ರಾತ್ರಿ ೮.೩೦ರ ವೇಳೆಗೆ ಬಜ್ಪೆ ಸಮೀಪ ಸುಹಾಸ್ ಶೆಟ್ಟಿಯ ಕಾರನ್ನು ಅಡ್ಡಗಟ್ಟಿ ತಲವಾರುಗಳಿಂದ ಬರ್ಬರವಾಗಿ ಕಡಿದು ಕೊಲೆ ಮಾಡಿದ್ದಾರೆ. ಕುಡುಪು ಬಳಿ ನಡೆದ ಗುಂಪು ಹತ್ಯೆಗೂ, ಸುಹಾಸ್ ಶೆಟ್ಟಿ ಹತ್ಯೆಗೂ ಯಾವುದೇ ಸಂಬಂಧ ಇಲ್ಲ. ಸುಹಾಸ್ ಹತ್ಯೆ ಪೂರ್ವ ದ್ವೇಷದಿಂದ ಯೋಜಿತ ರೀತಿಯ ಕೊಲೆಯಾಗಿದೆ ಎಂದು ವಿವರಿಸಿದರು.
ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಪ್ರಕರಣಗಳಿವೆ. ಅಬ್ದುಲ್ ಸಫ್ವಾನ್ ವಿರುದ್ಧ ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ೨೦೧೯ರಲ್ಲಿ ಪ್ರಕರಣ ದಾಖಲಾಗಿದೆ. ನಿಯಾಜ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣವಿದೆ. ಮಹಮ್ಮದ್ ಮುಜಾಮಿಲ್ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ, ಕಲಂದರ್ ಶಾಫಿ ವಿರುದ್ಧ ಸುರತ್ಕಲ್, ಬರ್ಕೆ, ಪಣಂಬೂರು ಠಾಣೆಯಲ್ಲಿ, ಆದಿಲ್ ಮೆಹರೂಫ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.
ಸುಹಾಸ್ ಕೊಲೆ ನಡೆದ ತಕ್ಷಣ ಸ್ಥಳದಿಂದ ಆರೋಪಿಗಳು ಪರಾರಿಯಾಗುತ್ತಿರುವ ದೃಶ್ಯದ ವಿಡಿಯೋ ವೈರಲ್ ಆಗಿತ್ತು. ವೈರಲ್ ಆದ ವಿಡಿಯೋದಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರಿದ್ದರು. ಇವರಿಬ್ಬರೂ ಆರೋಪಿ ನಿಯಾಝ್ನ ಸಂಬಂಧಿಕರಾಗಿದ್ದು, ಅವರ ಗುರುತು ಪತ್ತೆ ಹಚ್ಚಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಇಷ್ಟಕ್ಕೂ ಪೋಲೀಸ್ ಇಲಾಖೆ ಕಾಂಗ್ರೆಸ್ ಪಕ್ಷ ಮತ್ತು ಜಿಲ್ಲಾ ಸದ್ರಿ ಕೋಮಿನ ಶಾಸಕರ ಕೈಗೊಂಬೆ,ಈ ಅಧಿಕಾರಿಯೂ ಹೊರತಲ್ಲ.
ವಾಹನ ಪೂರೈಕೆ ಮಾಡಿದವರನ್ನು ಬಂಧಿಸಿಲ್ಲ,ಕನಿಷ್ಠ ವಾಹನಗಳನ್ನು ಕೂಡಾ ಸುಪರ್ದಿಗೆ ಪಡೆದಿಲ್ಲ.ವಿಶ್ವಸನೀಯವಾಗಿ ಕರ್ತವ್ಯ ಪಾಲನೆ ಮಾಡದೇ ಪ್ರತೀಕಾರ ಕ್ಕೆ ಪ್ರೋತ್ಸಾಹಿಸುತ್ತಿದೆ.ಇಲಾಖೆ ಅರಾಜಕತೆಗೂ
ಕುಮ್ಮಕ್ಕು ಕೊಡುತ್ತಿದೆ.