ಹೊಸದಿಗಂತ ಅಂಕೋಲಾ :
ಭಾರಿ ಮಳೆಮತ್ತು ಗಂಗಾವಳಿ ನದಿಯಲ್ಲಿ ತೀವ್ರವಾಗಿರುವ ಸೆಳೆತದ ಹಿನ್ನೆಲೆಯಲ್ಲಿ ಕೇರಳದ ಲಾರಿ ಚಾಲಕ ಅರ್ಜುನ್ ಮತ್ತಿಬ್ಬರ ಪತ್ತೆ ಕಾರ್ಯ ಸ್ಥಗಿತಗೊಳಿಸಲಾಗುವುದು ಎಂಬ ವರದಿಯನ್ನು ಕರ್ನಾಟಕ ಮತ್ತು ಕೇರಳ ಸರ್ಕಾರಗಳು ತಳ್ಳಿ ಹಾಕಿವೆ.
ಮೂವರ ಪತ್ತೆಯಾಗುವ ತನಕ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ ಎಂದು ಸ್ಪಷ್ಟನೆ ನೀಡಿವೆ.
ಕೇರಳ ಮುಖ್ಯಮಂತ್ರಿ ಸೂಚನೆ ಮೇರೆಗೆ ಸ್ಥಳಕ್ಕೆ ಬಂದಿದ್ದ ಕೇರಳ ಸಚಿವ ಮುಹಮ್ಮದ್ ರಿಯಾಜ್ ,ಕ್ಷೇತ್ರದ ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ಉಭಯ ರಾಜ್ಯಗಳ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಕಾರ್ಯಾಚರಣೆ ಬಗ್ಗೆ ಚರ್ಚೆ ನಡೆಸಲಾಗಿದೆ. ಭೂಕುಸಿತದಿಂದ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರನ್ನು ಪತ್ತೆ ಹಚ್ಚಲು ಕೇರಳ ಮತ್ತು ಕರ್ನಾಟಕ ರಾಜ್ಯಗಳ ನಡುವಿನ ಸಹಕಾರವನ್ನು ಖಚಿತಪಡಿಸಿಕೊಳ್ಳಲು ರ್ಚೆಯಲ್ಲಿ ಭಾಗವಹಿಸಿದ್ದರು. ಅರ್ಜುನ್ ಸಿಗುವವರೆಗೂ ಮಿಷನ್ ಮುಂದುವರಿಯುತ್ತದೆ. ಸಭೆಯಲ್ಲಿ ವಿವರಣೆ ನೀಡಿದ ಶಾಸಕ ಸತೀಶ ಸೈಲ್, ಅರ್ಜುನ್ ಪತ್ತೆ ವಿಳಂಬವಾಗುತ್ತಿರುವ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ. ಕೇರಳ ಸಚಿವ ರಿಯಾಜ್ ಮತ್ತು ಶಾಸಕರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಅರ್ಜುನ್ ಪತ್ತೆಗೆ ಕರ್ನಾಟಕ ಸರ್ಕಾರ ನಡೆಸುತ್ತಿರುವ ಕಾರ್ಯಾಚರಣೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ತಾವು ಅರ್ಜುನ್ ಕುಟುಂಬದೊಂದಿಗೆ ಸಂವಹನ ನಡೆಸಿದ್ದು, ಅವರೂ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು. ಸಭೆಯಲ್ಲಿ ಕೋಝಿಕ್ಕೋಡ್ ಸಂಸದ ಎಂ.ಕೆ.ರಾಘವನ್. ಶಾಸಕರಾದ ಎ.ಕೆ.ಎಂ.ಅಶ್ರಫ್, ಸಚಿಂದೇವ್, ಲಿಂಡೋ ಜೋಸೆಫ್, ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಕಾರವಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಉಪಸ್ಥಿತರಿದ್ದರು. ಇಂದು ಬೆಳಗ್ಗೆ ಸಚಿವ ಎ.ಕೆ.ಸಸೀಂದ್ರನ್ ಕೂಡ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಶನಿವಾರ ಬೆಳಿಗ್ಗೆ ಮತ್ತೆ ಶೋಧ ಕಾರ್ಯಾಚರಣೆ ಆರಂಭವಾಗಿದೆ. ನೌಕಾಪಡೆ, ಸೇನೆ, ಎನ್ ಡಿಆರ್ ಎಫ್ ಕೈ ಜೋಡಿಸಿವೆ.ಲಾರಿ ಒಳಗಡೆ ಇರುವ ಚಾಲಕ ಅರ್ಜುನ್ ನನ್ನು ಹೊರತೆಗೆಯಲು ಆಪತ್ಭಾಂಧವ ಈಶ್ವರ್ ಮಲ್ಪೆ ತಂಡ ಸಹ ಬಂದಿದೆ.