ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಕ್ಷೇತರ ಅಭ್ಯರ್ಥಿಯೊಬ್ಬರು ಬಿಜೆಪಿಯ ಚಿಹ್ನೆ ಮತ್ತು ಪಕ್ಷದ ಹೆಸರು ಬಳಸಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಾಗಿ ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಚುನಾವಣಾ ಏಜೆಂಟ್ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಪಕ್ಷೇತರ ಅಭ್ಯರ್ಥಿಯೊಬ್ಬರು ತನ್ನ ಪ್ರಚಾರ ಸಾಮಾಗ್ರಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕಾ ಪ್ರಟಕಣೆಗಳಲ್ಲಿ ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರನ್ನು ಮತ್ತು ಭಾವಚಿತ್ರವನ್ನು ಉಪಯೋಗಿಸುತ್ತಿದ್ದು , ತಾನು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ಓರ್ವ ಪಕ್ಷೇತರ ಅಭ್ಯರ್ಥಿ ಚುನಾವಣಾ ಆಯೋಗ ತನಗೆ ನೀಡಿದ ಚಿಹ್ನೆಯನ್ನು ಜನರಿಗೆ ತಿಳಿಸುವ ಪಯತ್ನ ಮಾಡಬೇಕೇ ವಿನಃ ರಾಷ್ಟ್ರೀಯ ಪಕ್ಷವೊಂದರ ಚಿಹ್ನೆಯನ್ನು ಪ್ರಾಚಾರದಲ್ಲಿ ಉಪಯೋಗಿಸುವುದು, ರಾಷ್ಟ್ರೀಯ ಪಕ್ಷದ ನಾಯಕರ ಭಾವಚಿತ್ರಗಳನ್ನು ಪ್ರಚಾರ ಕಾರ್ಯದಲ್ಲಿ ಕಾನೂನು ರೀತ್ಯಾ ಉಪಯೋಗಿಸುವಂತಿಲ್ಲದಿದ್ದರೂ, ಪಕ್ಷೇತರ ಅಭ್ಯರ್ಥಿಯು ತನ್ನ ಪ್ರಚಾರ ಕಾರ್ಯಗಳಲ್ಲಿ, ಪ್ರಚಾರ ಸಾಮಾಗ್ರಿಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಚಿಹ್ನೆ ಮತ್ತು ಇತರ ನೋಂದಣಿಗಳನ್ನು ಬಳಸುತ್ತಿದ್ದು,, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ. ಇದನ್ನು ಪರಿಶೀಲನೆ ನಡೆಸಿ, ಪುತ್ತೂರಿನ ಸ್ವತಂತ್ರ ಅಭ್ಯರ್ಥಿಯವರ ವಿರುದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಈ ಕುರಿತು ಪರಿಶೀಲಾನ ತನಿಖೆ ಕೈಗೆತ್ತಿಕೊಂಡಿರುವುದಾಗಿ ತಿಳಿದು ಬಂದಿದೆ.