ಹೊಸದಿಗಂತ ಡಿಜಿಟಲ್ ಡೆಸ್ಕ್:
MLA ಟಿಕೆಟ್ ವಂಚನೆ ಪ್ರಕರಣದಲ್ಲಿ ಚೈತ್ರಾಳ ಬ್ಯಾಂಕ್ ಖಾತೆಗಳನ್ನು ಸಿಸಿಬಿ ಪೊಲೀಸರು ಪರಿಶೀಲಿಸಿದ್ದಾರೆ. ಚೈತ್ರಾ ತನ್ನ ಆಪ್ತನಾದ ಶ್ರೀಕಾಂತ್ ಹೆಸರಿನಲ್ಲಿ 40 ಲಕ್ಷ ಹಣ ಠೇವಣಿ, 65 ಲಕ್ಷದ ಮೌಲ್ಯದ ಚಿನ್ನಾಭರಣಗಳನ್ನು ಇಟ್ಟಿರುವುದು ಪತ್ತೆಯಾಗಿದೆ. ಜೊತೆಗೆ 1.08 ಕೋಟಿ ರೂ .ಗಳ ಆಸ್ತಿಪಾಸ್ತಿಯ ದಾಖಲೆಗಳು ಕೂಡ ಸಿಸಿಬಿ ಪೊಲೀಸರ ಕೈಸೇರಿದೆ.
ಪ್ರಕರಣದ ಆರೋಪಿಗಳಲ್ಲೊಬ್ಬನಾದ ಶ್ರೀಕಾಂತ್ ನೀಡಿದ ಮಾಹಿತಿಯಂತೆ, ಬ್ರಹ್ಮಾವರ ಉಪ್ಪೂರಿನ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿಟ್ಟಿದ್ದ ನಗ, ನಗದುಗಳನ್ನು ಪತ್ತೆ ಮಾಡಿದ್ದಾರೆ.
ಇದರ ಜೊತೆಗೆ ಚೈತ್ರಾ ಸಾಕಷ್ಟು ಹಣವನ್ನು ಜಮೀನು, ಮನೆ ನಿರ್ಮಾಣದಲ್ಲಿ ಹೂಡಿಕೆ ಮಾಡಿರುವುದು ಕೂಡ ಬಹಿರಂಗವಾಗಿದೆ. ಕುಂದಾಪುರದಲ್ಲಿರೋ ಹಳೆಯ ಮನೆಯ ಪಕ್ಕದಲ್ಲಿ ಚೈತ್ರಾ ಭೂಮಿ ಖರೀದಿಸಿದ್ದು, ಅಲ್ಲಿ ಮಹಡಿ ಮನೆಯೊಂದನ್ನು ಕಟ್ಟಿದ್ದಾರೆ.
ಇದೇ ಮನೆಯಲ್ಲಿ ಚೈತ್ರಾ ಮತ್ತು ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಗಗನ್ ಕಡೂರು ಮತ್ತು ಶ್ರೀಕಾಂತ್ 3 ಕೋಟಿ ಹಂಚಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಶ್ರೀಕಾಂತ್ ಕೂಡ ತನ್ನ ಪಾಲಿಗೆ ಬಂದಿದ್ದ ಹಣದಲ್ಲಿ ಕಾರ್ಕಳದಲ್ಲಿ ಜಮೀನು ಖರೀದಿಸಿ ಮನೆಯನ್ನು ಕಟ್ಟಲಾರಂಭಿಸಿದ್ದು, ನಿರ್ಮಾಣ ಹಂತದಲ್ಲಿರುವ ಮಹಡಿ ಮನೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.