ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿ ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ತಪ್ಪುವುದು ಬಹುತೇಕ ಖಚಿತ ಎಂಬ ಮಾತು ಕೇಳಿಬರುತ್ತಿದ್ದು, ಈ ಹಿನ್ನೆಲೆ ಮೈಸೂರಿನಲ್ಲಿಂದು ಸಾಲು ಸಾಲು ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ನಡೆಸದಂತೆ ಮನವಿ ಮಾಡಿಕೊಂಡಿದ್ದಾರೆ.
ಆತ್ಮೀಯ ಕಾರ್ಯಕರ್ತರೇ ಮತ್ತು ಹಿತೈಷಿಗಳೇ, ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಜೀ ಇಲ್ಲದೆ ನಾನು ಏನಾಗಿದ್ದೇನೆ? ಈ 2 ಫೋಟೋಗಳನ್ನು ನೋಡಿ ಮತ್ತು ಅರ್ಥಮಾಡಿಕೊಳ್ಳಿ. ನನ್ನ ರಾಜಕೀಯ ಅಸ್ತಿತ್ವಕ್ಕೆ ನಾನು ಮೋದಿಜಿಗೆ ಋಣಿಯಾಗಿದ್ದೇನೆ. ಪ್ರತಿಭಟನೆ ಮಾಡಬೇಡಿ ಎಂದು ನಿಮ್ಮೆಲ್ಲರಿಗೂ ವಿನಮ್ರವಾಗಿ ವಿನಂತಿಸುತ್ತೇನೆ. ನಾವೆಲ್ಲರೂ ಒಂದೇ ಕುಟುಂಬದವರು, ಮೋದಿಜಿಗಾಗಿ ಕೆಲಸ ಮಾಡೋಣ. ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ಕರ್ನಾಟಕ ಬಿಜೆಪಿ ಚುನಾವಣೆ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರವಾಲ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಪ್ರತಾಪ ಸಿಂಹ ಪರ ಪೋಸ್ಟರ್ ಅಭಿಯಾನ ಆರಂಭವಾಗಿದೆ. ಸರಣಿ ಪೋಸ್ಟರ್ಗಳ ಮೂಲಕ ಪ್ರತಾಪ ಸಿಂಹ ಪರ ಅಭಿಮಾನಿಗಳು ಬ್ಯಾಟಿಂಗ್ ನಡೆಸಿದ್ದಾರೆ.
ಹೀಗಾಗಿ ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನನ್ನ ಜೀವ ಇರುವವರೆಗೂ ನಾನು ಮೋದಿ ಭಕ್ತ. ಯಾರು ಏನೇ ಕೊಡುತ್ತೇನೆ ಎಂದರೂ ನಾನು ಎಲ್ಲೂ ಹೋಗಲ್ಲ. ಸಾಯುವವರೆಗೂ ನಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಏನೇ ನಿರ್ಧಾರ ತೆಗೆದುಕೊಂಡರೂ ನಾನು ಸ್ವೀಕರಿಸುತ್ತೇನೆ. ಮೋದಿಗಿಂತ ದೊಡ್ಡದು ಯಾವುದೂ ಇಲ್ಲ. ಅವಕಾಶ ಮಾಡಿಕೊಟ್ಟರು ಖುಷಿ ಇದೆ. ಕೊಡದಿದ್ದರೂ ತೃಪ್ತಿಯಿದೆ ಎಂದರು.
ಟಿಕೆಟ್ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಎಳೆದು ತರಬೇಡಿ. ಬಿಎಸ್ ವೈ ಪಕ್ಷ ಕಟ್ಟದಿದ್ದರೆ ರಾಜ್ಯದಲ್ಲಿ ಬಿಜೆಪಿ ಎಲ್ಲಿ ಇರುತ್ತಿತ್ತು? ಬಿಎಸ್ ವೈ ಬಿಜೆಪಿಯನ್ನು ಕಟ್ಟದಿದ್ದರೆ ರಾಜ್ಯದಲ್ಲಿ ಬಿಜೆಪಿ ಇರುತ್ತಿತ್ತಾ? ನಮ್ಮಂತವರು ಎಲ್ಲಿ ಎಂಪಿಗಳಾಗುತ್ತಿದ್ದೆವು? ಕರ್ನಾಟಕಕ್ಕೆ ಯಡಿಯೂರಪ್ಪ ಒಂದು ರೀತಿ ಮೋದಿ ಇದ್ದಹಾಗೆ ಎಂದು ಹೇಳಿದ್ದಾರೆ.