ಹೊಸದಿಗಂತ ವರದಿ, ಕಲಬುರಗಿ:
ದೇಶದ ಪ್ರಗತಿಗೆ ಶ್ರಮಿಸಿದ ಭಾರತ ಮಾತೆಯ ಮೂವರು ಮಹಾನ್ ಪುತ್ರರಾದ ಮಾಜಿ ಪ್ರಧಾನ ಮಂತ್ರಿಗಳಾದ ಚೌಧರಿ ಚರಣ್ ಸಿಂಗ್ ಜಿ, ಬಹುಮುಖ ರಾಜಕಾರಣಿ, ಶ್ರೀ ಪಿವಿ ನರಸಿಂಹರಾವ್ ಮತ್ತು ಖ್ಯಾತ ಕೃಷಿ ವಿಜ್ಞಾನಿ ಪ್ರೊ. ಎಂ ಎಸ್ ಸ್ವಾಮಿನಾಥನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದಕ್ಕೆ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಮಣ್ಣಿನ ಮಗ, ಚೌಧರಿ ಚರಣ್ ಸಿಂಗ್ ಜಿ ಅವರು ತಮ್ಮ ಜೀವನದುದ್ದಕ್ಕೂ ರೈತರ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸಿದರು.ಬಹುಮುಖಿ ಪ್ರತಿಭೆ ಮತ್ತು ಬಹುಭಾಷಾವಾದಿ, ಶ್ರೀ ಪಿವಿ ನರಸಿಂಹರಾವ್ ಅವರು ಉದಾರೀಕರಣ ಮತ್ತು ಆರ್ಥಿಕ ಸುಧಾರಣೆಗಳ ಅಪ್ರತಿಮ ವಾಸ್ತುಶಿಲ್ಪಿ ಹಾಗೂ ಪ್ರೊ.ಎಂ.ಎಸ್.ಸ್ವಾಮಿನಾಥನ್ ಅವರು ಹಸಿರು ಕ್ರಾಂತಿಯ ಮೂಲಕ ಭಾರತವನ್ನು ವಿಶ್ವದ ಕೃಷಿ ಭೂಪಟದಲ್ಲಿ ಇರಿಸಿದರು ಎಂದು ಬಣ್ಣಿಸಿದ್ದಾರೆ.
ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದ ಪ್ರಗತಿಗೆ ಅಪಾರವಾದ ಕೊಡುಗೆ ನೀಡಿದ ನಿಜವಾದ ನಾಯಕರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.