ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವುದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ‘ಗ್ಯಾರಂಟಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ .
ಮಧ್ಯಪ್ರದೇಶದ ಗುನಾ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ‘ದೇಶದ ಸಂಪನ್ಮೂಲಗಳಿಗೆ ಮುಸ್ಲಿಮರು ಮೊದಲ ಹಕ್ಕುದಾರರು ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ ಬಿಜೆಪಿ ಹೇಳುವಂತೆ ಸಂಪನ್ಮೂಲದ ಹಕ್ಕು ಇರುವುದು ಬಡವರು, ದಲಿತರು, ಇತರೆ ಹಿಂದುಳಿದ ವರ್ಗದವರು ಮತ್ತು ಬುಡಕಟ್ಟು ಜನರಿಗೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ವೈಯಕ್ತಿಕ ಕಾನೂನು, ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ತ್ರಿವಳಿ ತಲಾಖ್ ಮತ್ತೆ ಜಾರಿಮಾಡುವುದಾಗಿ ಹೇಳುತ್ತಿದೆ. ಈ ದೇಶವು ಷರಿಯಾ ಕಾನೂನಿನಂತೆ (ಇಸ್ಲಾಮಿಕ್ ಕಾನೂನು) ನಡೆಯಬೇಕೇಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಶಾ, ರಾಹುಲ್ ಅವರೇ, ತುಷ್ಟೀಕರಣಕ್ಕಾಗಿ ನಿಮಗೆ ಅನಿಸಿದ್ದೆಲ್ಲವನ್ನೂ ಮಾಡಿ. ಬಿಜೆಪಿ ಇರುವವರೆಗೂ ನಿಮಗೆ ಯಾವುದೇ ವೈಯಕ್ತಿಕ ಕಾನೂನು ಜಾರಿಗೆ ತರಲು ಸಾಧ್ಯವಿಲ್ಲ. ಈ ದೇಶವು ಯುಸಿಸಿ ಮತ್ತು ಸಂವಿಧಾನದ ಪ್ರಕಾರ ನಡೆಯುತ್ತದೆ. ಇದು ನಮ್ಮ ಸಂವಿಧಾನದ ಸ್ಫೂರ್ತಿಯೂ ಹೌದು. ಉತ್ತರಾಖಂಡದಲ್ಲಿ ಯುಸಿಸಿಯನ್ನು ಈಗಾಗಲೇ ಜಾರಿಗೆ ತಂದಿದ್ದೇವೆ. ಅದನ್ನು ಇಡೀ ದೇಶದಲ್ಲಿ ಜಾರಿಗೊಳಿಸುವುದು ಬಿಜೆಪಿ ಮತ್ತು ಮೋದಿ ಅವರ ಭರವಸೆ ಎಂದರು.