ಇಡೀ ರಾಜ್ಯದಲ್ಲಿ ಮೋದಿ ಅಲೆ ಎದ್ದಿದೆ , ಗೆಲುವು ನಮ್ಮದೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಡೀ ರಾಜ್ಯದಲ್ಲಿ ಎದ್ದಿದೆ ಮೋದಿ ಅಲೆ, ಗೆಲುವು ನಮ್ಮದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬಸವಕಲ್ಯಾಣದಲ್ಲಿ ವಿಜಯ ಸಂಕಲ್ಪ 3ನೇ ರಥ ಯಾತ್ರೆಯಲ್ಲಿ ಮಾತನಾಡಿ, ಬಸವಣ್ಣನ ಕರ್ಮಭೂಮಿಯಿಂದ ಈ ಯಾತ್ರೆ ಆರಂಭವಾಗಿದೆ. ಇದಕ್ಕೆ ಬಸವಣ್ಣನ ಪ್ರೇರಣೆ ಇದೆ. ಬಸವಕಲ್ಯಾಣವು ಜನರ ಆಕರ್ಷಣೆಯ ಕೇಂದ್ರ ಬಿಂದು. ಇಡೀ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ. ನರೇಂದ್ರ ಮೋದಿಜಿ ಅವರ ಸಾಧನೆಗಳನ್ನು ಜಗತ್ತೇ ಕೊಂಡಾಡುತ್ತಿದೆ ಎಂದು ತಿಳಿಸಿದರು.

ಕೋವಿಡ್ ನಿಯಂತ್ರಣದ ಮಹತ್ವದ ಕಾರ್ಯವನ್ನು ನಮ್ಮ ಪ್ರಧಾನಿ ಮೋದಿಜಿ ಮಾಡಿದ್ದಾರೆ. 140 ಕೋಟಿ ಜನರಿಗೆ ಉಚಿತ ಲಸಿಕೆ ನೀಡಿದ್ದಾರೆ ಎಂದ ಅವರು, ಶ್ರೀಲಂಕಾ- ಪಾಕಿಸ್ತಾನಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿವೆ. ಪಾಕ್ ಜನತೆ ಮೋದಿಜಿ ಅವರಂಥ ನಾಯಕತ್ವ ಬಯಸುತ್ತಿದ್ದಾರೆ ಎಂದು ವಿವರಿಸಿದರು. ದೇಶದ ಸಾಧನೆ, ದೇಶ, ರಾಜ್ಯಗಳ ಅಭಿವೃದ್ಧಿಯನ್ನು ಗಮನಿಸಿ ಮತ್ತೆ ಬಿಜೆಪಿ ಆಡಳಿತಕ್ಕೆ ಅವಕಾಶ ಕೊಡಬೇಕೆಂದು ವಿನಂತಿಸಿದರು.

ಕಾಂಗ್ರೆಸ್ ದೇಶದಲ್ಲಿ ದೂಳೀಪಟವಾಗಿದೆ. ರಾಜ್ಯದಲ್ಲೂ ಕಾಂಗ್ರೆಸ್ ಅಂತ್ಯಯಾತ್ರೆ ಈ ಚುನಾವಣೆ ಮೂಲಕ ನಡೆಯಲಿದೆ ಎಂದು ತಿಳಿಸಿದರು. 2023ರ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ತಿಳಿಸಿದರು.

ರಾಜ್ಯದ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ಮೀಸಲಾತಿ ಹೆಚ್ಚಳ ಸೇರಿದಂತೆ ಅನೇಕ ಜನಪರ ಕಾರ್ಯಗಳನ್ನು ಬಿಜೆಪಿ ಮಾಡಿದೆ. ಭಾರತವು ಮೋದಿಜಿ ಅವರ ನೇತೃತ್ವದಲ್ಲಿ ವಿಶ್ವವಂದ್ಯ ರಾಷ್ಟ್ರವಾಗಲು ಸಹಕರಿಸಿ ಎಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!