ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಮಂಕಿ ಪಾಕ್ಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪ್ರತೀ ಜಿಲ್ಲೆಗಳ ಮೇಲೂ ಹದ್ದಿನಕಣ್ಣಿರಿಸಲಾಗಿದೆ. ಈ ಬಗ್ಗೆ ಖುದ್ದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದು, ವಿಮಾನ ನಿಲ್ದಾಣ ಹೊಂದಿರುವ ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಯಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಲಾಗಿದೆ ಎಂದಿದ್ದಾರೆ.
ಜ್ವರ ಅಥವಾ ಇನ್ನಾವುದೇ ರೋಗ ಲಕ್ಷಣ ಹೊಂದಿರುವ ಮಂದಿಯನ್ನು ಕೋವಿಡ್ ಸೇರಿದಂತೆ ಸಮಗ್ರ ತಪಾಸಣೆಗೆ ಒಳಪಡಿಸಲಾಗುವುದು.ಪ್ರತೀ ಜಿಲ್ಲೆಗಳಲ್ಲಿ ಕ್ವಾರಂಟೈನ್ ಘಟಕ ಸ್ಥಾಪನೆ, ವೈದ್ಯಕೀಯ ಕಾಲೇಜುಗಳಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು ಎಂದ ಅವರು, ಕಾಯಿಲೆ ಕಾಣಿಸಿಕೊಂಡಿರುವ ದೇಶಗಳಿಂದ ಆಗಮಿಸಿದ ಪ್ರಯಾಣಿಕರು ಇರುವುದರಿಂದ ವಿಮಾನ ನಿಲ್ದಾಣಗಳಲ್ಲಿ ಎಚ್ಚರಿಕೆ ವಹಿಸಬೇಕು. ರೋಗಿಯ ಜೊತೆ ಪ್ರಯಾಣಿಕರು ಸ್ವಯಂ ನಿಗಾ ವಹಿಸಬೇಕು ಎಂದಿದ್ದಾರೆ.
ರೋಗ ನಿಯಂತ್ರಣಕ್ಕಾಗಿ ರಾಜ್ಯ ಮಟ್ಟದಲ್ಲಿ ಮೇಲ್ವಿಚಾರಣಾ ಸೆಲ್ ರಚಿಸಲಾಗುವುದು.
ಸೋಂಕಿತ ವ್ಯಕ್ತಿ ಜು.12ರಂದು ಯುಎಇ ಸಮಯ ಸಂಜೆ 5 ಗಂಟೆಗೆ ಶಾರ್ಜಾ- ತಿರುವನಂತಪುರ ಇಂಡಿಗೋ ವಿಮಾನದಲ್ಲಿ ಬಂದಿದ್ದು, ಆ ವಿಮಾನದಲ್ಲಿ 164 ಪ್ರಯಾಣಿಕರು ಮತ್ತು 6 ಕ್ಯಾಬಿನ್ ಸಿಬ್ಬಂದಿ ಇದ್ದರು. ಅವರಲ್ಲಿ, ಸೋಂಕಿತ ವ್ಯಕ್ತಿಯ ಪಕ್ಕದ ಸೀಟ್ಗಳಲ್ಲಿದ್ದ 11 ಜನರು ಹೈ ರಿಸ್ಕ್ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿದ್ದಾರೆ. ಈ ವಿಮಾನದಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಸ್ವಯಂ-ಮೇಲ್ವಿಚಾರಣೆ ನಡೆಸಬೇಕು, ಯಾವುದೇ ರೋಗ ಲಕ್ಷಣ ಕಂಡಲ್ಲಿ 21 ದಿನಗಳಲ್ಲಿ ಆರೋಗ್ಯ ಅಧಿಕಾರಿಗಳಿಗೆ ವರದಿ ಮಾಡಬೇಕು. ಹಲವರ ದೂರವಾಣಿ ಸಂಖ್ಯೆ ಲಭ್ಯವಾಗದ ಕಾರಣ ಪೋಲೀಸರ ನೆರವಿನಿಂದ ಅವರನ್ನು ಸಂಪರ್ಕಿಸಲಾಗುತ್ತಿದೆ ಎಂದರು.