ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳ ಕಳ್ಳರೆಂದು ಶಂಕಿಸಿ ನಾಲ್ವರು ಸನ್ಯಾಸಿಗಳ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ.
ಘಟನೆಯ ಕುರಿತು ಸನ್ಯಾಸಿಗಳು ಇಲ್ಲಿಯವರೆಗೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರನ್ನ ದಾಖಲಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರೇ ಸ್ವಯಂ ದೂರು ದಾಖಲು ಮಾಡಿಕೊಂಡಿದ್ದಾರೆ.
ನಾವು ಔಪಚಾರಿಕ ಯಾವುದೇ ದೂರು ಅಥವಾ ವರದಿಯನ್ನು ಸ್ವೀಕರಿಸಿಲ್ಲ, ಆದರೆ ವೈರಲ್ ವೀಡಿಯೊಗಳನ್ನು ಪರಿಶೀಲಿಸಿ ತನಿಖೆ ಕೈಗೊಂಡಿರುವುದಾಗಿ ಸಾಂಗ್ಲಿಯ ಪೊಲೀಸ್ ಅಧೀಕ್ಷಕ ದೀಕ್ಷಿತ್ ಗೆಡನ್ ಹೇಳಿದ್ದಾರೆ. ಉತ್ತರಪ್ರದೇಶದ ಸನ್ಯಾಸಿಗಳು ಕರ್ನಾಟಕದ ಬಿಜಾಪುರದಲ್ಲಿ ತೀರ್ಥಯಾತ್ರೆ ಮುಗಿಸಿ ಹಿಂತಿರುಗಿ ಸೊಲ್ಲಾಪುರದ ಪಂಢರಪುರಕ್ಕೆ ‘ದರ್ಶನ’ಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಸಾಂಗ್ಲಿಯಲ್ಲಿ ಮಗುವಿನ ಸಹಾಯ ಕೇಳುತ್ತಿದ್ದ ಸನ್ಯಾಸಿಗಳನ್ನು ಗಮನಿಸಿದ ಗ್ರಾಮಸ್ಥರು, ಮಕ್ಕಳ ಕಳ್ಳರೆಂದು ಭಾವಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಸನ್ಯಾಸಿಗಳು ಮಥುರಾದ ಪಂಚ ದಶನಂ ಜುನ ಅಖಾಡಕ್ಕೆ ಸೇರಿದವರಾಗಿದ್ದು, ವಿವಿಧ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಂಡಿದ್ದರು ಎನ್ನಲಾಗಿದೆ.