ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ (INSAT), ಯುರೋಪಿನ ಹವಾಮಾನ ಸಂಸ್ಥೆಗಳ ಉಪಗ್ರಹಗಳು ಹಾಗೂ ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಆಡಳಿತ (NOAA) ಸೆರೆಹಿಡಿದ ಚಿತ್ರಗಳು ಆಘಾತಕಾರಿ ದೃಶ್ಯಗಳನ್ನು ಬಹಿರಂಗಗೊಳಿಸಿದ್ದು, ಭಾರತದ ಹಲವು ಪ್ರದೇಶಗಳಲ್ಲಿ ಮೋಡಗಳ ಕೊರತೆಯನ್ನು ತೋರಿಸಿವೆ.
INSAT-3DR ಉಪಗ್ರಹದ ಇತ್ತೀಚಿನ ಚಿತ್ರಗಳ ಪ್ರಕಾರ, ಈಶಾನ್ಯ ರಾಜ್ಯಗಳು ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿದರೆ, ದೇಶದ ಬಹುತೇಕ ಒಳನಾಡಿನಲ್ಲಿ ಮೋಡಗಳ ವ್ಯಾಪ್ತಿ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಸಾಮಾನ್ಯವಾಗಿ ಜೂನ್ ಮಧ್ಯಭಾಗದಲ್ಲಿ ಕಾಣುವ ದಟ್ಟ ಮುಂಗಾರು ಮೋಡಗಳು ಈ ಬಾರಿ ವ್ಯಾಪಕವಾಗಿ ಕಾಣಿಸದಿರುವುದು ಹವಾಮಾನ ತಜ್ಞರ ಆತಂಕ ಹೆಚ್ಚಿಸಿದೆ.
ದೇಶದ ಹಲವೆಡೆ ಜೂನ್ ತಿಂಗಳಿನಲ್ಲಿ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದು, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಕೊರತೆ ದಾಖಲಾಗಿದೆ. ಈ ಪರಿಸ್ಥಿತಿಯಿಂದ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀಳುವ ಸಾಧ್ಯತೆಯಿದೆ.
ಇದನ್ನೂ ಓದಿ:
ಉಪಗ್ರಹ ಚಿತ್ರಗಳಲ್ಲಿ ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ನಿರ್ಮಲ ಆಕಾಶ ಗೋಚರಿಸುತ್ತಿದ್ದು, ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಿಂದ ಭೂಭಾಗದತ್ತ ತೇವಭರಿತ ಮೋಡಗಳ ಚಲನೆ ನಿರೀಕ್ಷಿತ ಮಟ್ಟದಲ್ಲಿ ಕಾಣಿಸದಿರುವುದು ಗೋಚರಿಸಿದೆ.
ಈ ನಡುವೆ ಹವಾಮಾನ ಇಲಾಖೆ ಜೂನ್ ಅಂತ್ಯದ ವೇಳೆಗೆ ಮುಂಗಾರು ಚಟುವಟಿಕೆಗಳು ಪುನಃ ಚುರುಕುಗೊಳ್ಳುವ ಸಾಧ್ಯತೆಯನ್ನು ಸೂಚಿಸಿದೆ. ಕರ್ನಾಟಕ, ಕೇರಳ, ತಮಿಳುನಾಡಿನ ಪಶ್ಚಿಮ ಘಟ್ಟ ಪ್ರದೇಶಗಳು ಹಾಗೂ ದಕ್ಷಿಣದ ಕೆಲವು ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. ಈ ನಡುವೆ, ಮಳೆ ಕೊರತೆಯಿಂದ ಉಂಟಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತೇವಾಂಶ ಸಂರಕ್ಷಣೆ, ನೀರಿನ ಸಮರ್ಪಕ ನಿರ್ವಹಣೆ ಹಾಗೂ ಪರ್ಯಾಯ ಬೆಳೆ ಯೋಜನೆಗಳ ಕುರಿತು ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.



