ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಪ್ರಕಾಶ್ ಸಿಂಗ್ ಬಾದಲ್ ಅಂತ್ಯಕ್ರಿಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಶಿರೋಮಣಿ ಅಕಾಲಿದಳದ ಉನ್ನತ ನಾಯಕ ಪ್ರಕಾಶ್ ಸಿಂಗ್ ಬಾದಲ್ (95) ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ಅವರ ಹುಟ್ಟೂರಾದ ಬಾದಲ್‌ಗೆ ತರಲಾಯಿತು. ಅವರ ಅಂತಿಮ ಸಂಸ್ಕಾರ ಗುರುವಾರ ನಡೆಯಲಿದೆ. ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳವಾರ ಕಣ್ಣು ಮುಚ್ಚಿದ್ದರು. ಸ್ವಾತಂತ್ರ್ಯಾನಂತರ ಸುಮಾರು 70 ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಐದು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಪಂಜಾಬ್ ರಾಜಕೀಯ, ಕಾನೂನು ಮತ್ತು ಸಿಖ್ ಧರ್ಮದಲ್ಲಿ ಗಾಡ್ ಫಾದರ್ ಆಗಿ ಮುಂದುವರೆದಿದ್ದರು.

ಪ್ರಧಾನಿ ನರೇಂದ್ರ ಮೋದಿ ಬುಧವಾರ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬುಧವಾರ ಚಂಡೀಗಢ ತಲುಪಿದ  ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮಾಜಿ ಮುಖ್ಯಮಂತ್ರಿ ಬಾದಲ್ ಅವರಿಗೆ ಅಂತಿಮ ವಿದಾಯ ಹೇಳಿದರು. ಪ್ರಕಾಶ್ ಸಿಂಗ್ ಬಾದಲ್ ಅವರ ಅನುಪಸ್ಥಿತಿಯು ಅವರ ವೈಯಕ್ತಿಕ ಕೊರತೆಯಾಗಿದೆ ಎಂದು ಮೋದಿ ಹೇಳಿದರು. ಮೋದಿ ಅವರಿಗೆ ದಶಕಗಳ ಕಾಲ ತುಂಬಾ ಆತ್ಮೀಯರಾಗಿದ್ದರು ಮತ್ತು ಅವರಿಂದ ಸಾಕಷ್ಟು ಕಲಿತಿದ್ದರು ಎಂಬುದನ್ನು ಸ್ಮರಿಸಿದ್ದಾರೆ.

ಏತನ್ಮಧ್ಯೆ, ಬಾದಲ್ ಅವರ ಗೌರವಾರ್ಥ ಭಾರತದಾದ್ಯಂತ ಎರಡು ದಿನಗಳ ಶೋಕಾಚರಣೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ. ಶೋಕಾಚರಣೆಯ ದಿನಗಳಲ್ಲಿ, ರಾಷ್ಟ್ರಧ್ವಜವನ್ನು ಎಲ್ಲಾ ಕಟ್ಟಡಗಳ ಮೇಲೆ ಅರ್ಧಕ್ಕೆ ಹಾರಿಸಲಾಗುತ್ತದೆ ಮತ್ತು ಈ ಎರಡು ದಿನಗಳಲ್ಲಿ ಯಾವುದೇ ಅಧಿಕೃತ ಮನರಂಜನೆ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಬಾದಲ್‌ ಅಂತ್ಯಸಂಸ್ಕಾರ ನೆರವೇರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!