ಬಳ್ಳಾರಿಯ ಬಿಮ್ಸ್​​ನಲ್ಲಿ​ ಬಾಣಂತಿ ಸಾವು: ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಳ್ಳಾರಿ ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಮುಂದುವರಿದಿದ್ದು, ವೈದ್ಯರ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಾಪಕವಾಗಿದೆ.

ಇತ್ತೀಚೆಗಷ್ಟೇ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್‌ ಮಾಡಿಸಿಕೊಂಡ ಬಳಿಕ ಮೂವರು ಬಾಣಂತಿಯರು ಸಾವನ್ನಪ್ಪಿದ್ದರು. ಸೋಮವಾರ (ನ.25) ರಾತ್ರಿ ಹೊಸಪೇಟೆ ಮೂಲದ ಮುಸ್ಕಾನ್ (22) ಮೃತಪಟ್ಟಿದ್ದರು. ಈ ಬೆನ್ನಲ್ಲೇ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ ಬಾಣಂತಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಕೂಡ್ಲಿಗೆ ತಾಲೂಕಿನ ಹಾಲಸಾಗರ ಗ್ರಾಮದ ಮಹಾಲಕ್ಷ್ಮಿ (20) ಸಾವಿಗೀಡಾದ ಮಹಿಳೆ. ಭಾನುವಾರ ಸಾಮಾನ್ಯ ಹೆರಿಗೆಯಾದ ಮಹಾಲಕ್ಷ್ಮಿಗೆ ಗಂಡು ಮಗು ಜನಿಸಿತ್ತು. ಹೆರಿಗೆ ಬಳಿಕ ಮಹಾಲಕ್ಷ್ಮಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಐಸಿಯುನಲ್ಲಿ ಇಟ್ಟು ಮೂರು ದಿನ ಚಿಕಿತ್ಸೆ ನೀಡಿದ್ದರು. ವೈದ್ಯರ ನಿರ್ಲಕ್ಷ್ಯದಿಂದ ಮಹಾಲಕ್ಷ್ಮಿ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆಸ್ಪತ್ರೆಗೆ ಕರೆತರುವ ಮುನ್ನ ಮಹಾಲಕ್ಷ್ಮಿ ಚೆನ್ನಾಗಿದ್ದಳು ಎಂದು ದೂರಿದ್ದಾರೆ.

ಈ ಕುರಿತು ಬಿಮ್ಸ್ ವೈದ್ಯರು ಹಾಗೂ ನಿರ್ದೇಶಕ ಗಂಗಾಧರ ಗೌಡ ಸ್ಪಷ್ಟನೆ ನೀಡಿದ್ದು, “ಮಹಾಲಕ್ಷ್ಮಿಗೆ ರಕ್ತಹೀನತೆ ಇತ್ತು, ಮೊದಲು ಅವರು ಕೂಡ್ಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದು, ನಂತರ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ನಾವು ಮೊದಲೇ ತಿಳಿಸಿದ್ದೆವು, ಅಲ್ಲದೇ ನಮ್ಮ ಪ್ರಯತ್ನ ನಾವು ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.

ಸದ್ಯ ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿರುವ ಈ ಪ್ರಕರಣಗಳು ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!