ಹೊಸದಿಗಂತ ವರದಿ, ಕೊಪ್ಪಳ:
ದೇವರ ಪ್ರತಿರೂಪವೇ ತಾಯಿ. ಆದರೆ, ಇಲ್ಲೊಬ್ಬ ಮಗ ತನ್ನ ಹೆತ್ತಮ್ಮನನ್ನೇ ಒಂಟಿಯಾಗಿ ದೇವಸ್ಥಾನದ ಬಳಿ ಬಿಟ್ಟ ತೆರಳಿದ್ದಾನೆ. ಅನಾಥೆಯಂತೆ ಬೀದಿ ಬೀದಿ ಅಲೆಯುತ್ತಿದ್ದ ಅಜ್ಜಿಯನ್ನು ನೋಡಿ ಮರುಗಿದ ಹಿರಿಯ ನಾಗರಿಕರ ಇಲಾಖೆ ಅಧಿಕಾರಿಗಳು ಆಕೆಯನ್ನು ರಕ್ಷಣೆ ಮಾಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.
ವೃದ್ಧೆ ತನ್ನ ಹೆಸರು ಖಾಸೀಂ ಬಿ, ತನ್ನದು ಉಜ್ಜಯಿನಿ ಗ್ರಾಮ ಎಂದು ಹೇಳಿಕೊಂಡಿದ್ದಾಳೆ. ಇತರ ವಿವರಗಳನ್ನು ಸರಿಯಾಗಿ ನೀಡಿಲ್ಲ. ಅಜ್ಜಿಯಿಂದ ಹೆಚ್ಚಿನ ವಿವರಗಳಾಗಲಿ ಅಥವಾ ದಾಖಲೆಗಳಾಗಲಿ ದೊರಕಿಲ್ಲ. ಎರಡು ದಿನದ ಹಿಂದೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಮಗನೊಡನೆ ಬಂದಿದ್ದಾಳೆ. ಮಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದರಲ್ಲಿದೆ ಎಂದು ಹೇಳಿ ಖಾಲಿ ಹಾಳೆ ಕೈಗಿತ್ತು ತೆರಳಿದ್ದಾನೆನ್ನಲಾಗಿದೆ.
ರಾತ್ರಿಯಾದರೂ ಮಗ ಮರಳಿ ಅಜ್ಜಿ ಬಳಿ ಬಂದಿಲ್ಲ. ಕಂಗಾಲಾದ ಅಜ್ಜಿ ಮಗನಿಗಾಗಿ ಹುಡುಕಾಡಿದ್ದಾಳೆ. ಆಕೆಯತ್ತ ಯಾರೂ ಬರದಿರುವುದನ್ನು ಗಮನಿಸಿದ ಸ್ಥಳೀಯರು ತಿನ್ನಲು ಆಹಾರ ನೀಡಿದ್ದಾರೆ. ಮಲಗಲು ಹಾಸಿಗೆ, ದಿಂಬು ನೀಡಿದ್ದಾರೆ. ಬಳಿಕ ಮೊಬೈಲ್ ಪರಿಶೀಲಿಸಿದಾಗ ಸಿಮ್ ಕಾರ್ಡ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಅಜ್ಜಿ ಯಾರು, ಯಾವ ಊರು ಎಂಬಿತ್ಯಾದಿ ವಿವರ ಸಿಕ್ಕಿಲ್ಲ. ಕೂಡಲೇ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ