ಹೊಸ ದಿಗಂತ ವರದಿ , ಬೀದರ್:
ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ 2018-19ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಗುರುವಾರ ಸಚಿವರ ಗೃಹ ಕಚೆರಿ ಬೋಂತಿ ತಾಂಡಾದಲ್ಲಿ ಮೋಟಾರ್ ಪಂಪ್ ಸೆಟ್ ಹಾಗೂ ಪೂರಕ ಸಾಮಗ್ರಿಗಳನ್ನು ವಿತರಿಸಿದರು.
ಯೋಜನೆಯಡಿ ಆಯ್ಕೆಯಾದ ಔರಾದ ಹಾಗೂ ಕಮಲನಗರ ತಾಲೂಕಿನ 11 ಪಲಾನುಭವಿಗಳಿಗೆ ಪಂಪ್ ಸೆಟ್ ಗಳನ್ನು ವಿತರಿಸಿದ ಮಾತನಾಡಿದ ಸಚಿವರು, ತಾಂಡಾದಲ್ಲಿ ವಾಸಿಸುವ ಜನತೆ ಕೃಷಿಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ ಸರ್ಕಾರವು ಬಡ ರೈತರ ಕೃಷಿ ಭೂಮಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಸಿಕೊಟ್ಟು ಅದಕ್ಕೆ ಮೋಟಾರ್ ಪಂಪ್ ಸೆಟ್ ಅಳವಡಿಸುವುದು, ವಿದ್ಯುತ್ ವ್ಯವಸ್ಥೆ ಮಾಡಿಕೊಡುವುದು ಸೇರಿದಂತೆ ಎಲ್ಲ ರೀತಿಯ ಪೂರಕ ಸಾಮಗ್ರಿಗಳನ್ನು ವಿತರಿಸುವ ಮೂಲಕ ನೀರಾವರಿಯುಕ್ತ ಕೃಷಿ ಚಟುವಟಿಕೆ ನಡೆಸಲು ಅನುಕೂಲ ಮಾಡಿಕೊಡಲಾಗುತ್ತದೆ. ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆಯಬೇಕು ಎಂದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಬೀದರ ವಲಯ ಕಛೇರಿಯ ಅಭಿವೃದ್ಧಿ ಅಧಿಕಾರಿ ಸುಭಾಷ ನಾಗೂರೆ, ಸಹಾಯಕ ಅಭಿಯಂತರರಾದ ಅನೀಲಕುಮಾರ ರಾಠೋಡ್, ಮುಖಂಡರಾದ ಸುಜಿತ್ ರಾಠೋಡ್, ಯೋಗೇಶ ಪಾಟೀಲ್, ಧನಾಜಿ ರಾಠೋಡ್ ಮತ್ತಿತರರಿದ್ದರು.