ಹೊಸದಿಗಂತ ವರದಿ, ಶಿವಮೊಗ್ಗ:
ಬಜರಂಗ ದಳದ ಕ್ರಿಯಾಶೀಲ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಯುಎಪಿಎ (ಅನ್ಲಾಫುಲ್ ಆಕ್ಟಿವಿಟಿ ಆಕ್ಟ್) ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಸಂಸದ ಪ್ರತಾಪ ಸಿಂಹ ಆಗ್ರಹಿಸಿದರು.
ಶನಿವಾರ ಹರ್ಷ ಮನೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೂಗಳ ಹತ್ಯೆಯಾದಾಗ ಪೊಲೀಸರು ಕೇವಲ ಕೊಲೆ ಕೇಸು ದಾಖಲಿಸುತ್ತಾರೆ. ಇದರಿಂದ ಕೊಲೆ ಆರೋಪಿಗಳು ನ್ಯಾಯಾಲಯದಿಂದ ಬೇಗ ಜಾಮೀನು ಪಡೆದು ಹೊರ ಬಂದು ಮತ್ತೆ ಅದೇ ಕೃತ್ಯದಲ್ಲಿ ತೊಡಗುತ್ತಾರೆ ಎಂದರು.
ಈ ಹತ್ಯೆ ವೈಯಕ್ತಿಕ ಕಾರಣಕ್ಕೆ ಆಗಿಲ್ಲ. ಇವರೊಬ್ಬ ಹಿಂದೂ ಕಾರ್ಯಕರ್ತ. ಹಿಂದೂ ಪರವಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ಕಾರಣಕ್ಕೆ ಮತಾಂಧರು ಧರ್ಮದ ಅಂಧಕಾರದಲ್ಲಿ ಕೊಲೆ ಮಾಡಿದ್ದಾರೆ. ಧರ್ಮಾಂಧತೆ ಬಿತ್ತುತ್ತಿರುವ ಪಿಎಫ್ಐ ಇದರ ಹಿಂದೆ ಇದೆ ಎಂದು ಹೇಳಿದರು.
ಈ ಹಿಂದೆ ಕೊಲೆಯಾದ ರುದ್ರೇಶ್, ಶರತ್ ಮಡಿವಾಳ, ಪ್ರವೀಣ್ ಪೂಜಾರಿ, ಕುಟ್ಟಪ್ಪ ಇವರ ಹತ್ಯೆಯಾದಾಗಲೂ ಕೇವಲ ಕೊಲೆ ಕೇಸು ದಾಖಲಿಸಿದ್ದ ಪರಿಣಾಮ ಆರೋಪಿಗಳು ಹೊರ ಬಂದಿದ್ದರು. ಮೈಸೂರಿನಲ್ಲಿ ಕೊಲೆ ಮಾಡಿದ್ದ ಅಜಿತ್ ಪಾಶ ಜೈಲಿನಿಂದ ಹೊರ ಬಂದಾಗ ನಾಪತ್ತೆಯಾಗಿದ್ದ. ಸ್ವಲ್ಪ ದಿನ ನಾಪತ್ತೆಯಾಗಿ ಮತ್ತೊಂದು ಕೊಲೆ ಮಾಡುತ್ತಾನೆ. ಮೈಸೂರಿನ ತನ್ವಿರ್ ಸೇಟ್ ಕೊಲೆ ಯತ್ನದಲ್ಲಿಯೂ ಇವರ ಪಾತ್ರ ಇರುವುದು ಬೆಳಕಿಗೆ ಬಂದಿತ್ತು ಎಂದರು.