ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬ ಸಮೇತವಾಗಿ ಗುರುವಾರ ಉತ್ತರಾಖಂಡನ ವಿಶ್ವವಿಖ್ಯಾತ ಬದರಿನಾಥ ಹಾಗೂ ಕೇದಾರನಾಥ ಕ್ಷೇತ್ರಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ಎರಡೂ ಸುಕ್ಷೇತ್ರಗಳಿಗೆ ಅಂಬಾನಿ 5 ಕೋಟಿ ರೂಪಾಯಿ ದೇಣಿಗೆ ನೀಡಿದರು.
ಬೆಳಗ್ಗೆ 7 ಗಂಟೆಗೆ ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಮುಖೇಶ್ ಅಂಬಾನಿ ಹಾಗೂ ಕುಟುಂಸ್ಥರು ಬಂದಿಳಿದರು. ಬದರಿನಾಥ ಧಾಮಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಇದಾದ ನಂತರ ಕೇದಾರನಾಥ ಧಾಮಕ್ಕೂ ಅಂಬಾನಿ ಕುಟುಂಬ ಸಮೇತವಾಗಿ ಭೇಟಿ ನೀಡಿದರು.
ಆಗಾಗ್ಗೆ ಮುಖೇಶ್ ಅಂಬಾನಿ ಕುಟುಂಬದೊಂದಿಗೆ ಬದರಿನಾಥ ಹಾಗೂ ಕೇದಾರನಾಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಅಂಬಾನಿ ಕುಟುಂಬ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ದೇವರ ದರ್ಶನ ಪಡೆಯದೇ ಹಿಂತಿರುಗಬೇಕಾಗಿತ್ತು. ಹೀಗಾಗಿ ಗುರುವಾರ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಬದರಿನಾಥ್ ಮತ್ತು ಕೇದಾರನಾಥಕ್ಕೆ ಭೇಟಿ ನೀಡಿದೆ.