ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ .
ಇನ್ನುಗುರುವಾಯೂರು ದೇವಾಲಯವನ್ನು ಪ್ರವೇಶಿಸಲು ಬಯಸುವ ಭಕ್ತರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಇದ್ದು, ಮುಖೇಶ್ ಅಂಬಾನಿ ಅದನ್ನು ಅನುಸರಿಸಿದ್ದಾರೆ. ಪುರುಷರು ತಮ್ಮ ಸೊಂಟದ ಸುತ್ತ ಮುಂಡು ಧರಿಸಬೇಕು. ಹಾಗೂ, ಎದೆಯ ಭಾಗವನ್ನು ಮುಚ್ಚಲು ಸಣ್ಣ ತುಂಡು ಬಟ್ಟೆಯನ್ನು (ವೇಷ್ಠಿ) ಬಳಸಬಹುದು. ಅದನ್ನು ಬಿಟ್ಟರೆ ಸೊಂಟದ ಮೇಲ್ಬಾಗ ಬೇರೆ ಬಟ್ಟೆಯನ್ನು ಧರಿಸುವಂತಿಲ್ಲ.
ಮುಖೇಶ್ ಅಂಬಾನಿ ದೇವಸ್ಥಾನಕ್ಕೆ ತಮ್ಮ ಭೇಟಿಯ ವೇಳೆ ಕೈಗಾರಿಕೋದ್ಯಮಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಭಾವಿ ಪತ್ನಿ ರಾಧಿಕಾ ಮರ್ಚೆಂಟ್ ಜೊತೆಗಿದ್ದರು. ಇನ್ನು, ಮುಖೇಶ್ ಅಂಬಾನಿ ಅವರು ಗುರುವಾಯೂರು ದೇವಸ್ಥಾನದಲ್ಲಿ 1.5 ಕೋಟಿ ರೂ. ಕಾಣಿಕೆ ಸಲ್ಲಿಸಿದ್ದಾರೆ.
65 ವರ್ಷದ ಮುಖೇಶ್ ಅಂಬಾನಿ ಅವರು ಶ್ರೀ ಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸುವ ಜತೆಗೆ ದೇವಾಲಯದ ಆನೆಗಳಾದ ಚೆಂತಮರಾಕ್ಷನ್ ಮತ್ತು ಬಲರಾಮನಿಗೆ ನೈವೇದ್ಯ ಸಲ್ಲಿಸಿದರು. ಹಾಗೂ, ತಮ್ಮ ಕುಟುಂಬದೊಂದಿಗೆ ದೇವಾಲಯದ ಸೋಪಾನಮ್ (ಒಳಗಿನ ಗರ್ಭಗುಡಿ) ನಲ್ಲಿ ತುಪ್ಪವನ್ನು ಅರ್ಪಿಸಿದರು. ಇನ್ನು, ಅಂಬಾನಿ 1.5 ಕೋಟಿ ರೂ. ಕಾಣಿಕೆ ಸಲ್ಲಿಸಿರುವುದು ಗುರುವಾಯೂರು ದೇವಸ್ಥಾನಕ್ಕೆ ಭಕ್ತನಿಂದ ಪಡೆದ ದೊಡ್ಡ ಮೊತ್ತವಾಗಿದೆ ಎಂದು ದೇವಸ್ಥಾನ ಹೇಳುತ್ತದೆ.
ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಕಾಣಿಕೆಯಾಗಿ ಚೆಕ್ ಅನ್ನು ನೀಡಿದರು ಎಂದು ಗುರುವಾಯೂರ್ ದೇವಸ್ವಂನ ಅಧ್ಯಕ್ಷ ಡಾ. ವಿ. ಕೆ ವಿಜಯನ್ ಹೇಳಿದ್ದಾರೆ. “ನಾನು ತೆರೆದಾಗ ಅದು 1 ಕೋಟಿ 51 ಲಕ್ಷ ರೂಪಾಯಿಗಳ ಚೆಕ್ ಆಗಿತ್ತು. ಇದು ಗುರುವಾಯೂರು ದೇವಸ್ಥಾನಕ್ಕೆ ಭಕ್ತರೊಬ್ಬರು ಅರ್ಪಿಸಿದ ಅತ್ಯಧಿಕ ಮೊತ್ತವಾಗಿದೆ. ಅವರು ಅದನ್ನು ದೇವಸ್ಥಾನದಲ್ಲಿ ಅನ್ನದಾನಕ್ಕೆ (ಭಕ್ತರಿಗೆ ಆಹಾರ) ಬಳಸಲು ತಮ್ಮ ಆಸಕ್ತಿ ವ್ಯಕ್ತಪಡಿಸಿದರು’’ ಎಂದೂ ಡಾ. ವಿಜಯನ್ ಹೇಳಿದ್ದಾರೆ.