ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂ ಕೋರ್ಟ್ ವಕೀಲೆ ರೇಣು ಸಿನ್ಹಾ ಅವರನ್ನು ಅವರ ಪತಿಯೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸುಪ್ರೀಂಕೋರ್ಟ್ ವಕೀಲೆ ರೇಣು ಸಿನ್ಹಾ ಅವರ ಮೃತದೇಹ ನೋಯ್ಡಾದ ಬಂಗಲೆಯ ಬಾತ್ರೂಂನಲ್ಲಿ ಪತ್ತೆಯಾಗಿತ್ತು. ರೇಣು ಪತಿ ನಿತಿನ್ ನಾಥ್ ಸಿನ್ಹಾ ಪತ್ನಿಯನ್ನು ಬರ್ಬರವಾಗಿ ಕೊಂದು ಅದೇ ಮನೆಯ ಸ್ಟೋರ್ ರೂಂನಲ್ಲಿ ಬಚ್ಚಿಟ್ಟುಕೊಂಡು ಕುಳಿತಿದ್ದರು ಎನ್ನುವ ಸ್ಫೋಟಕ ವಿವರ ಇದೀಗ ಹೊರಬಂದಿದೆ.
ರೇಣು ಹಾಗೂ ನಿತಿನ್ ಮಧ್ಯೆ ಬಂಗಲೆ ಮಾರುವ ವಿಷಯಕ್ಕೆ ಜಗಳಗಳಾಗಿತ್ತು. ನಿತಿನ್ ಮಾರಲು ಹೊರಟಾಗ ರೇಣು ವಿರೋಧಿಸಿದ್ದರು. ಇದೇ ವಿಚಾರಕ್ಕೆ ನಡೆದ ಗಲಾಟೆ ರೇಣು ಕೊಲೆಯಲ್ಲಿ ಕೊನೆಯಾಗಿದೆ. ಕೊಲೆ ಮಾಡಿ ಹೆದರಿದ ನಿತಿನ್ ಸ್ಟೋರ್ರೂಂನಲ್ಲಿ 36 ಗಂಟೆ ಅಡಗಿ ಕುಳಿತಿದ್ದರು. ಫೋನ್ ಟ್ರಾಕಿಂಗ್ ಮೂಲಕ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರೆ.
ರೇಣು-ನಿತಿನ್ ಪುತ್ರ ವಿದೇಶದಲ್ಲಿ ವಾಸವಾಗಿದ್ದು, ತಾಯಿಗೆ ಎರಡು ದಿನದಿಂದ ಕರೆ ಮಾಡುತ್ತಿದ್ದಾರೆ. ಆದರೆ ರೇಣು ಫೋನ್ಗೆ ಸಿಕ್ಕಿಲ್ಲ. ತಂದೆಯೂ ಫೋನ್ ರಿಸೀವ್ ಮಾಡದ ಕಾರಣ ಅನುಮಾನಗೊಂಡ ಪುತ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಗಲೆಯ ಸುತ್ತಮುತ್ತ ಪೊಲೀಸರು ಪರಿಶೀಲನೆ ನಡೆಸಿದ್ದು, ರೇಣು ಮೃತದೇಹ ಸಿಕ್ಕಿದೆ. ರೇಣು ಪತಿ ನಿತಿನ್ ವಿಚಾರಣೆ ನಡೆಯುತ್ತಿದೆ.