ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಆಕೆಯ ಜೊತೆ ದುರ್ವರ್ತನೆ ತೋರಿದ್ದಾನೆ ಎನ್ನುವ ಆರೋಪದ ಮೇರೆಗೆ ನಟ ದರ್ಶನ್ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಕೊಲೆಯಲ್ಲಿ ದರ್ಶನ್ ಜೊತೆ ಇನ್ನಷ್ಟು ಹುಡುಗರು ಭಾಗಿಯಾಗಿದ್ದು, ಅವರು ದರ್ಶನ್ ಹೆಸರನ್ನು ಬಿಟ್ಟುಕೊಟ್ಟಿದ್ದಾರೆ. ಇದೀಗ ಪೊಲೀಸರು ದರ್ಶನ್ ಹಾಗೂ ಪವಿತ್ರಾ ಗೌಡ ಅವರ ವಿಚಾರಣೆ ನಡೆಸುತ್ತಿದ್ದಾರೆ. ಈ ಸುದ್ದಿ ದರ್ಶನ್ ಫ್ಯಾನ್ಸ್ಗೆ ಆಘಾತ ನೀಡಿದೆ.
ಕೊಲೆಯಾದ ರೇಣುಕಾಸ್ವಾಮಿ ಚಿತ್ರದುರ್ಗದ ಮೂಲದವರಾಗಿದ್ದು, ಬೆಂಗಳೂರಿನ ಅಪೊಲೊ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದರು. ಈತನ ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ರಸ್ತೆಯಲ್ಲೇ ದರ್ಶನ್ ಹೊಡೆಯುವ ರಭಸದಲ್ಲಿ ಖಾಸಗಿ ಅಂಗಕ್ಕೆ ಜೋರಾಗಿ ಒದ್ದಿದ್ದು, ಆತನನ್ನು ಸಾಯಲು ಬಿಟ್ಟು ಹೋಗಿದ್ದಾರೆ. ನಟನ ನಿರ್ಲಕ್ಷ್ಯದಿಂದ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದು, ವಿಜಯಲಕ್ಷ್ಮಿ ಹಾಗೂ ದರ್ಶನ್ ಸುಖ ಸಂಸಾರದಲ್ಲಿ ಪವಿತ್ರಾ ಗೌಡ ಹುಳಿ ಹಿಂಡಿದ್ದಾರೆ ಎಂದು ಸಿಟ್ಟಿನಲ್ಲಿದ್ದ. ಪದೇ ಪದೆ ಆಕೆಗೆ ಸಂದೇಶ ಕಳುಹಿಸಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ರೇಣುಕಾಸ್ವಾಮಿ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಎಂಟು ತಿಂಗಳ ಗರ್ಭಿಣಿ ಕೂಡ ಪತಿಯ ಸಾವಿನ ಆಘಾತದಲ್ಲಿದ್ದಾರೆ.